ಚಿತ್ರ ವಿಮರ್ಶೆ • ನಿರುಪಮ ಸಿನಿಮಾಗಳ ಬಗ್ಗೆ ಆಸಕ್ತಿಯಿದ್ದ ನನಗೆ ಮೇಷ್ಟ್ರು ವಿಮುಕ್ತಿ ಸಿನಿಮಾ ನೋಡಲು ಸೂಚಿಸಿದರು. ‘ಯಾವ ಥೀಮ್ ಒಳಗೊಂಡಿದೆ’ ಎಂದು ಕೇಳಿದೆ. ‘ಇಲೆಕ್ಟ್ರಾ ಕಾಂಪ್ಲೆಕ್ಸ್’ ಎಂದರು. ಮತ್ತೆ ಅದರ ಬಗ್ಗೆ ವಿವರಣೆ ಕೇಳಿದೆ. ‘ಕೆಲ ಹೆಣ್ಣುಮಕ್ಕಳು ತಮ್ಮ ಅಪ್ಪನನ್ನ ಇನ್ನಿಲ್ಲದಂತೆ ಹಚ್ಚಿಕೊಳ್ಳುವ, ಆತನೇ ತನ್ನ ಜಗತ್ತು ಎಂದು ಭಾವಿಸುವ, ಫೊಸೆಸಿವ್ ಆಗುವ exಣಡಿemiಣಥಿಯನ್ನ ಇಲೆಕ್ಟ್ರಾ ಕಾಂಪ್ಲೆಕ್ಸ್ ಅಂತಾರೆ’ ಎಂದು ವಿವರಿಸಿದರು. ಅಂದರೆ ಇದು ನೆಗಟಿವ್ ಅರ್ಥದಲ್ಲಿ ಬಿಂಬಿತವಾಗಿದೆಯೆ? ಎಂದು ಕೇಳಿದ್ದಕ್ಕೆ ‘ನೊ ಅದು ಸೈಕಾಲಾಜಿಕಲ್ ಡಿಸಾರ್ಡರ್’ ಅಂದರು. ಥಟ್ಟನೆ ನನಗೆ ಬೇರೆ ಚಿತ್ರ ನೆನಪಿಗೆ ಬಂತು. ಪುಟ್ಟ ಮಕ್ಕಳಾಗಿದ್ದಾಗ ಸಂಬಂಧಿಕರು ಸಾಮಾನ್ಯವಾಗಿ ಕೇಳುವ ಪ್ರಶ್ನೆ-ನಿನಗೆ ಅಪ್ಪ ಇಷ್ಟಾನೋ ಅಥವಾ ಅಮ್ಮನೋ? ಕೆಲವು ಮಕ್ಕಳ್ಳಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲೇ ಈ ಕಾಂಪ್ಲೆಕ್ಸ್ ಶುರುವಾಗಬಹುದಲ್ಲವೇ ಅನಿಸಿತು. ಪಿ.ಶೇಷಾದ್ರಿಯವರ ವಿಮುಕ್ತಿ ಸಿನಿಮಾ ನೋಡಿದೆ. ಪ್ರಾರಂಭದಲ್ಲಿ ಸಂಬಂಧಗಳ ವಸ್ತುಸ್ಥಿತಿಯ ಪರಿಚಯವನ್ನು ಚೆನ್ನಾಗಿಯೇ ಅನಾವರಣಗೊಳಿಸಿದ್ದಾರೆ. ಯಾರ್ಯಾರು ಯಾರ್ಯಾರನ್ನು ಹೇಗೇಗೆ ಪರಿಭಾವಿಸುತ್ತಿದ್ದಾರೆ ಎಂಬುದನ್ನೆಲ್ಲ ರಾಧ ಮತ್ತು ಕೃಷ್ಣನ ಒಂದು ಚಿತ್ರದ ಮೂಲಕ ಹೇಳಿರುವುದು ಒಂದು ಸಮರ್ಥ ತಂತ್ರ ಅನಿಸುವುದರ ಜೊತೆಜೊತೆಗೆ ಇವತ್ತಿನ ಹೆಣ್ಣು ಒಂದು ಚಿತ್ರದ ಮೂಲಕ ಭಾವಸಂಬಂಧವನ್ನು ಕಲ್ಪಿಸಿಕೊಳ್ಳುವಷ್ಟು ವ್ಯವಧಾನ ಮತ್ತು ಮನಸ್ಥಿತಿಯನ್ನು ಇರಿಸಿಕೊಂಡಿದ್ದಾಳೆಯೆ ಎಂದು ಚಿಂತಿಸಬೇಕಾಗುತ್ತದೆ. ಯಾಕೆಂದರೆ ಕಾಲ ಬದಲಾದಂತೆ ಕಲ್ಪಿಸಿಕೊಳ್ಳುವ ವಿಧಾನಗಳೂ ಬದಲಾಗುತ್ತವೆ ಎಂದು ನನಗೆ ಬಹಳ ಸಲ ಅನಿಸಿದೆ. ಈ ಕಥೆಯ ಸ್ಥೂಲರೂಪವನ್ನು ಒಂದಿಷ್ಟು ಬಸಿದುಕೊಳ್ಳೋಣ. ಕಥಾನಾಯಕಿ ಮಾಧವಿತನ್ನ ಅಪ್ಪನ ಬಗೆಗೆ ಗಾಢ ಪ್ರೀತಿಯ ಜೊತೆಜೊತೆಗೆ ವ್ಯಾಮೋಹವನ್ನು ಹೊಂದಿರುವವಳು. ಹಾಗಾಗಿ ಅಪ್ಪನ ಜೊತೆಗಿನ ಸಾಂಗತ್ಯಕ್ಕೆ ಒಂದಿಷ್ಟು ಅಡ್ಡಿಯಾದರೂ ಅವಳಿಗೆ ಇರುಸುಮುರುಸಾಗುತ್ತದೆ. ಇದು ಆಕೆಯಲ್ಲಿರಬಹುದಾದ ಇಲೆಕ್ಟ್ರಾ ಕಾಂಪ್ಲೆಕ್ಸ್.ಅಪ್ಪ ಒಬ್ಬ ಪ್ರಖ್ಯಾತ ಚಿತ್ರಕಲಾವಿದ. ಒಬ್ಬಳು ಫಾರಿನರ್ ಹೆಣ್ಣುಮಗಳು ಮಂದಿರಾಳ ಅಪ್ಪನ ಬಳಿ ಚಿತ್ರಕಲೆ ಕಲಿಯಲು ಹಂಬಲಿಸಿ ಬರುತ್ತಾಳೆ. ಮೊದಲು ‘ಉಹುಂ’ ಅಂದು ನಂತರ ಕಲಿಸಲು ಒಪ್ಪುವ ಅಪ್ಪ ಫಾರಿನರ್ ಹೆಣ್ಣುಮಗಳ ಶ್ರದ್ಧೆ ಮತು ತನ್ಮಯತೆಗೆ ಮೆಚ್ಚಿ ಹೆಚ್ಚು ಆಸಕ್ತಿಯಿಂದ ಕಲಿಸಲು ಆರಂಭಿಸುತ್ತಾನೆ. ಇವರಿಬ್ಬರ ಸಾಂಗತ್ಯ ಮಂದಿರಾಳಲ್ಲಿ ಕಿಡಿ ಹೊತ್ತಿಸುತ್ತದೆ. ತನ್ನ ಮನೋವ್ಯಾಧಿಯ ಸಂಕೀರ್ಣತೆ ಹೆಚ್ಚುತ್ತದೆ. ಒಂದು ದಿನ ತನ್ನನ್ನು ಆಳದಲ್ಲಿ ಸುಡುತ್ತಿರುವ ಬೇಗುದಿಯನು ಅಪ್ಪನೆದುರು ಹೊರಗೆಡಹುತ್ತಾಳೆ. ಅಪ್ಪ ಘಾಸಿಗೊಳ್ಳುತ್ತಾನೆ. ಮನೆಬಿಟ್ಟು ಹೊರಟುಬಿಡುತ್ತಾನೆ. ಮಾಧವಿಮಾನಸಿಕವಾಗಿ ಮತ್ತಷ್ಟು ಕುಸಿಯುತ್ತಾಳೆ. ಡಾಕ್ಟರ್ ಆಗಿರುವ ತನ್ನ ಅಂಕಲ್ನಿಂದ ತನ್ನಲ್ಲಿರುವುದು ‘ಇಲೆಕ್ಟ್ರಾ ಕಾಂಪ್ಲೆಕ್ಸ್’ ಎಂದು ತಿಳಿಯುತ್ತದೆ. ಈ ಎಲ್ಲವುಗಳಿಂದ ಹೊರಬರುವ ಬಗೆಯನ್ನು ಕಂಡುಕೊಳ್ಳಬೇಕೆಂದು ನಿರ್ಧರಿಸುವ ಹೊತ್ತಿಗೆ ಸರಿಯಾಗಿ ಇಂಟರ್ವೆಲ್. ನಂತರ ‘ಎಂಟು ವರ್ಷಗಳ ನಂತರ’ ಎಂಬ ಸೇತುವೆ ಬರಹ ಕಾಣಿಸಿಕೊಳ್ಳುತ್ತದೆ. ಮಂದಿರಾಳ ಜೀವನದಲ್ಲಿ ಬದಲಾವಣೆಯಾಗಿದೆ. ತಾಯಿಯಾಗಿದ್ದಾಳೆ ಮತ್ತು ಡಿವೋರ್ಸ್ ಆಗಿದೆ. ಪುಟ್ಟ ಹೆಣ್ಣುಮಗಳಿದ್ದಾಳೆ. ನ್ಯೂಸ್ ಪೇಪರ್ನಲ್ಲಿ ಕಾಶಿಯ ಮುಕ್ತಿಧಾಮದ ಬಗೆಗಿನ ಒಂದು ಪ್ರಕಟಣೆ ಕಾಣುತ್ತದೆ. ಮುಕ್ತಿಧಾಮದ ಕೋಣೆಯೊಂದರ ಮೇಲೆ ಶಿವನ ಒಂದು ಚಿತ್ರ ಕಾಣುತ್ತದೆ. ಅಪ್ಪ ಬಿಡಿಸುತ್ತಿದ್ದ ಶೈಲಿಯ ಚಿತ್ರ. ಸುಳಿವು ಸಿಕ್ಕಂತೆ ಅನಿಸಿ ಮಗಳೊಂದಿಗೆ ಕಾಶಿಗೆ ಅಪ್ಪನ ಹುಡುಕಾಟಕ್ಕಾಗಿ ಹೊರಡುತ್ತಾಳೆ. ಅಲ್ಲಿನ ವಿಪರ್ಯಾಸವೆಂದರೆ ತನ್ನ ಅಪ್ಪ ತನ್ನ ಹುಡುಕಾಟಕ್ಕೆ ಸಿಗದೆ ತನ್ನ ಮಗಳಿಗೆ ಸಿಗುತ್ತಿರುತ್ತಾನೆ-ಅದೂ ಸಂಬಂಧಗಳ ಖಚಿತ ಅರಿವು ಇಲ್ಲದ ರೀತಿಯಲ್ಲಿ. ಈ ಹುಡುಕಾಟದಲ್ಲಿ ಆಕೆಗೆ ಪ್ರೀತಿಗೂ ವ್ಯಾಮೋಹಕ್ಕೂ ಇರುವ ಅಂತರ ತಿಳಿಯುತ್ತದೆ. ಈ ಬಿಡುಗಡೆಯ ಭಾವವೇ ‘ವಿಮುಕ್ತಿ’ಯಾಗಿ ಅರಳುತ್ತದೆ. ಶೇಷಾದ್ರಿಯವರ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಾನು ನೋಡಿಲ್ಲ. ಆದರೆ ಈ ಸಿನಿಮಾವನ್ನು ನೋಡಿದ ನಂತರದಲ್ಲಿ ನನ್ನ ಮನಸನ್ನು ಗಾಢವಾಗಿ ತುಂಬಿಕೊಂಡದ್ದೇನು ಎಂದು ಪರೀಕ್ಷಿಸಿಕೊಳ್ಳತೊಡಗಿದೆ. ಮೂಳೆಗಳ ಮೇಲೆ ತೆಳು ಚರ್ಮ ಹೊದ್ದುಕೊಂಡ ಕಾಶಿಯ ಮುಕ್ತಿಧಾಮದಲ್ಲಿನ ದೇಹಗಳು. ಚಿತ್ರದಲ್ಲಿ ವಿಮುಕ್ತರಾಗುವುದಕ್ಕೆ ಹಂಬಲಿಸುವ ಮೂರು ಜೀವಗಳಿದ್ದಾವೆ. ಮಾಧವಿತನ್ನ ಕಾಂಪ್ಲೆಕ್ಸಿಟಿಯಿಂದ ವಿಮುಕ್ತಳಾಗಲು, ಅಪ್ಪ ತಾನು ಕಟ್ಟಿಕೊಂಡ ಢೋಲಾಯಮಾನ ಸಂಬಂಧಗಳಿಂದ ವಿಮುಕ್ತಿ ಹೊಂದಲು, ಮತ್ತು ಕಾಶಿಯಲ್ಲಿಯ ಮುಕ್ತಿಧಾಮದಲ್ಲಿನ ಮುದುಕರು ತಮ್ಮ ದೇಹ ತ್ಯಜಿಸಿ ವಿಮುಕ್ತರಾಗಲು. ಈ ಮೂರೂ ಬಗೆಗಳಲ್ಲಿ ಮಾಧವಿಮತ್ತು ಅಪ್ಪನ ವಿಮುಕ್ತತೆಯನ್ನು ಮನಗಾಣಿಸಲು ಶೇಷಾದ್ರಿಯವರು ಸ್ವಲ್ಪ ಕಸರತ್ತು ಮಾಡಿರುವಂತೆ ಅನಿಸುತ್ತದೆ. ಆದರೆ ಮುದುಕರು ತಮ್ಮ ವಿಮುಕ್ತತೆಯ ಮಾತಾಡದೆಯೂ ನಿಜಕ್ಕೂ ಅದರ ಅಪೇಕ್ಷೆಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇದು ಅತ್ಯಂತ ಸಾರ್ಥಕ ಚಿತ್ರಣ ಅನಿಸುತ್ತದೆ. ಸಿನಿಮಾದಲ್ಲಿ ಮಾತು ತೀರ ಅನಿವಾರ್ಯವಾಗಿ ಬರಬೇಕಾದಾಗ ಮಾತ್ರ ಬಂದರೆ ಪರಿಣಾಮಕಾರಿಯಾಗಿರುತ್ತದೆ ಎನ್ನುವುದಕ್ಕೆ ಕಾಶಿ ಪಟ್ಟಣದ ದೃಶ್ಯಾವಳಿಗಳು ಸಾಕ್ಷಿಯಾಗುತ್ತವೆ. ಇದಲ್ಲದೆ ವಿಮುಕ್ತಿಯೆಂದರೆ ಕೇವಲ ವೈಯಕ್ತಿಕ ನೆಲೆಯಲ್ಲಿ ಮಾತ್ರ ಚಿಂತಿಸುವುದಾಗಿರದೆ ಅದು ಮತ್ತೊಬ್ಬರ ಬಿಡುಗಡೆಯ ಭಾವದಲ್ಲೂ ತಮಗೆ ದಕ್ಕಬಹುದಾದ ಭಾವವಾಗಿಯೂ ಇದನ್ನು ಕಂಡುಕೊಳ್ಳಬಹುದು. ಮಂದಿರಾಳಾ ಗಂಡ ಮಂದಿರಾಳ ಮನಸ್ಸಿನ ಸಂಕೀರ್ಣತೆ ಕಳೆದುಹೋದರೆ ಸಾಕು ಎಂದು ಹಂಬಲಿಸುತ್ತಾನೆ; ಡಾಕ್ಟರ್ ಅಂಕಲ್ ತಮ್ಮ ಅಪ್ಪನ ಬಗೆಗಿನ ಶ್ರಾದ್ಧಕರ್ಮಗಳ ವಿಚಾರದಲ್ಲಿ ತನ್ನ ವೈಯಕ್ತಿಕ ಪ್ರತಿಷ್ಠೆಗಿಂತ ತಾನು ನಿರಾಳನಾಗುವ ಬಗೆಯ ಕಡೆ ಮನಸ್ಸು ಮಾಡುತ್ತಾನೆ. ಪ್ರತ್ಯೇಕವಾಗಿ ಬಿಡಿಬಿಡಿಯಾಗಿ ಇವಿಗಳನ್ನು ಗಮನಿಸಿದಾಗ ಎಲ್ಲ ಚಂದ ಅನಿಸುತ್ತದೆ. ಆದರೆ ಒಟ್ಟುಗೂಡಿಸಿಕೊಂಡು ನೋಡಿದಾಗ ಅಷ್ಟು ಎಫೆಕ್ಟಿವ್ ಅಲ್ಲ ಅನಿಸುತ್ತದೆ. ಛಿoಟಿಣiಟಿuiಣಥಿನಲ್ಲಿ ಒಂದು ಹದಕಾಣುವುದಿಲ್ಲ. ಮಾಧವಿಕಾಶಿಗೆ ಹೋಗುವವರೆಗಿನ ಎಲ್ಲ ದೃಶ್ಯಗಳನ್ನ ತುಂಬ ಪ್ರಯತ್ನಪೂರ್ವಕವಾಗಿ ಕಟ್ಟಲು ಪ್ರಯತ್ನಿಸಿದ್ದಾರೇನೊ ಅನಿಸುತ್ತದೆ. ಆದರೆ ಅನಂತರದ್ದು ಸ್ಟಾರ್ಟ್ ಆದ ಗಾಡಿಯ ಹಾಗೆ. ಮೊದಲಿನದು ತಳ್ಳುವ ಗಾಡಿಯ ಹಾಗೆ. ಅಭಿನಯ ವಿಭಾಗದಲ್ಲಿ ಭಾವನಾ ಕನ್ನಡಕದ ಹೊರತಾಗಿ ಹೊಸತೇನು ಕಾಣಲಿಲ್ಲ. ಕಾಲದಿಂದ ಕಾಲಕ್ಕೆ ರಾಮಕೃಷ್ಣರ ಪಾತ್ರ ಬದಲಾದರೂ ಅವರ ಕಂಠ ಮತ್ತು ಅವರ ಧಾಟಿ ಬದಲಾಗಿಲ್ಲ. ಮಿಕ್ಕವರದು ಎಲ್ಲ ಮಾಮೂಲು-ಹೇಳಲೇಬೇಕಾದಂಥದ್ದೇನೂ ಇಲ್ಲ.ಟೀವಿಯಲ್ಲಿ ಮತ್ತು ಕಛೇರಿಯಲ್ಲಿ ಕೊಳಲು ನುಡಿಸುವಾಗಿನ ಉತ್ಸಾಹವನ್ನು ಪ್ರವೀಣ್ ಗೋಡ್ಕಿಂಡಿ ಯಾಕೋ ಈ ಚಿತ್ರದಲ್ಲಿ ತೋರಿಲ್ಲ. ಕೆಮರಾ ಚಿಟಿgಟe ಅಷ್ಟೊಂದು ಆಪ್ತ ಅನಿಸುವುದಿಲ್ಲ.
|
|