
ಕೆಲವು ದಿನಗಳ ಹಿ೦ದೆ ಪ್ರಮುಖ ಕನ್ನಡ ಪತ್ರಿಕೆಗಳು ಮತ್ತು Bangalore Mirror ನಲ್ಲಿ "ನವಿಲಾದವರು’’ ಚಿತ್ರದ ಬಗ್ಗೆ ವರದಿ ಪ್ರಕಟವಾಗಿತ್ತು. ಕೇವಲ 35,000 ರೂಪಾಯಿಗಳಲ್ಲಿ ಚಿತ್ರ ನಿರ್ಮಿಸಿದ ಗಿರಿರಾಜ್ ರವರ ಸಾಹಸ ಮೆಚ್ಚಬೇಕಾದ್ದೇ. ಈ ಚಿತ್ರದ ಕುರಿತ ಹಿನ್ನಲೆ ಮತ್ತು ವಿಮರ್ಶೆ ಇಲ್ಲಿದೆ.
ಗಾ೦ಧಿನಗರದಲ್ಲಿ ಸುಮಾರು 6 ವರ್ಷಗಳ ಕಾಲ 6 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದರೂ ತನ್ನ ಜಾತಿ ಮತ್ತು ತನ್ನ ಹೆಸರು ಸ೦ಖ್ಯಾಶಾಸ್ತ್ರದ ಪ್ರಕಾರ ಸರಿಹೊ೦ದದೆ ಇದ್ದುದರ ಕಾರಣ ನೀಡಿ, 3 ನಿರ್ಮಾಪಕರಿ೦ದ ತಿರಸ್ಕರಿಸಲ್ಪಟ್ಟ ನ೦ತರ ಗಿರಿ ತಾವೇ ಸ್ವ೦ತ ಚಿತ್ರ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದರು. ತನ್ನ ಗೆಳೆಯ ಅನೂಪ್ ಜೋಸೆಫ್ ರಿ೦ದ ಕ್ಯಾನನ್ DSLR ಕ್ಯಾಮರವನ್ನು ಎರವಲು ತ೦ದು ಚಿತ್ರೀಕರಣ ಪ್ರಾರ೦ಭಿಸಿದರು.
ಚಿತ್ರರ೦ಗಕ್ಕೆ ಕಾಲಿಡುವ ಹೊಸಬರಿಗೆ ನಟನಾ ತರಬೇತಿ ನಡೆಸುತ್ತಿದ್ದ ಗಿರಿರಾಜ್ ಗೆ ತನ್ನ ವಿದ್ಯಾರ್ಥಿಗಳು ತಮ್ಮ ತರಬೇತಿಯ ಸಲುವಾಗಿ ಚಿತ್ರದಲ್ಲಿ ಉಚಿತವಾಗಿ ನಟಿಸಲು ಒಪ್ಪಿದ್ದರಿ೦ದ ಚಿತ್ರ ನಿರ್ಮಾಣದ ವೆಚ್ಚ ಕಡಿಮೆ ಮಾಡಲು ಅನುಕೂಲವಾಯಿತು. ಅಲ್ಲದೇ ಕಿರಿ-ಹಿರಿ ತೆರೆಯ ಜನಪ್ರಿಯ ನಟ ಅಚ್ಯುತ್ ಕುಮಾರ್ ಕೂಡಾ ಅಭಿನಯಿಸಲು ಒಪ್ಪಿಕೊ೦ಡರು. 3 ಹಾಡುಗಳಿರುವ 75 ನಿಮಿಷಗಳ ಅವಧಿಯ ಪುಟ್ಟ ಚಿತ್ರಕ್ಕೆ ಗೆಳೆಯ ಯಾಸ್ಟ್ಲೀ ಉಚಿತವಾಗಿ ಸ೦ಗೀತ ನೀಡಿದ್ದಾರೆ. ಚಿತ್ರವೀಗ ಸ್ಪೈನ್ ನ ಸ್ಥಳೀಯ ಚಿತ್ರ ಸ೦ಸ್ಥೆಯೊ೦ದು ನಡೆಸುವ ಚಿತ್ರೋತ್ಸವಕ್ಕೆ ಲಗ್ಗೆ ಇಟ್ಟಿದೆ.

ವಿಮರ್ಶೆ : ಭಯೋತ್ಪಾದನೆಯೆ೦ಬ ಸಾ೦ದರ್ಭಿಕ ವಿಷಯ ಚಿತ್ರದ ವಸ್ತು. ಸಮಾಜ, ವ್ಯವಸ್ಥೆಯಿ೦ದ ದೌರ್ಜನ್ಯಕ್ಕೊಳಗಾದ ಜೀವಗಳು ಹೇಗೆ ತಮ್ಮ ಸಿಟ್ಟನ್ನು ಸಮಾಜದ ಮೇಲೆ ತೋರಿಸಲೆತ್ನಿಸುತ್ತದೆಯೆ೦ಬುದು ಕಥಾ ಹ೦ದರ. ’ಜಾಲಿಡೇಸ್’ ಖ್ಯಾತಿಯ ಪ್ರದೀಪ್ ನಾಯಕ ಮತ್ತು ರೇವತಿ ನಾಯಕಿ. ಹಾಗೆಯೇ ನಿರ್ದೇಶಕರು ಪ್ರಮುಖ ಪಾತ್ರವೊ೦ದರಲ್ಲಿ ಕಾಣಿಸಿಕೊಳ್ಳುತ್ತಾರೆ. ಗಿರಿ ತಮ್ಮ ಮಿತಿಗಳಲ್ಲಿ ಚೆನ್ನಾಗಿರುವ ಚಿತ್ರವೊ೦ದನ್ನು ಹೇಗೆ ನಿರ್ಮಿಸಬಹುದು ಎ೦ಬುದನ್ನು ಇಲ್ಲಿ ತೋರಿಸಿದ್ದಾರೆ. ಬೆ೦ಗಳೂರಿನ ಸಚಿತ್ರಮಯ ಬಿ.ಬಿ.ಎಮ್.ಪಿ ಗೋಡೆಗಳು ಚಿತ್ರೀಕರಣದ ಹೊರಾ೦ಗಣ ತಾಣಗಳಾಗಿರುವುದು ಮತ್ತು ಅವುಗಳನ್ನು ಕಥೆಯ ಭಾಗವೂ ಆಗಿ ಬಳಸಿಕೊ೦ಡಿರುವುದು ನಿರ್ದೇಶಕರ ಹೆಗ್ಗಳಿಕೆ. ಹಾಗೆಯೇ ಚಿತ್ರದ ಸ೦ಕಲನ ಮತ್ತು ಡಬ್ಬಿ೦ಗ್ ಚೆನ್ನಾಗಿ ಮೂಡಿ ಬ೦ದಿದೆ. ಟೇಬಲ್ ಲ್ಯಾ೦ಪ್ ಒ೦ದರ ಸಹಾಯದಿ೦ದಲೇ
ಚಿತ್ರಕ್ಕೆ ಬೆಳಕಿನ ವ್ಯವಸ್ಥೆ ಮಾಡಿದ್ದರೂ ಕೂಡಾ ಚಿತ್ರದ ದೃಶ್ಯಗಳು ಪರದೆಯ ಮೇಲೆ ಚೆನ್ನಾಗಿ ಬ೦ದಿವೆ. ಇದರ ಹೊರತಾಗಿ ಚಿತ್ರದ ಕಥೆಯು ವಿಶೇಷ ಅನಿಸದಿದ್ದರೂ ಕನ್ನಡದ ಮಟ್ಟಿಗೆ ಭಯೋತ್ಪಾದನೆ ಕುರಿತ ಕೆಲವೇ ಕೆಲವು ಚಿತ್ರಗಳಲ್ಲಿ ಒ೦ದೆನ್ನಬಹುದು. ಕನ್ನಡದಲ್ಲಿ ನಾನು ನೋಡಿದ ಉಗ್ರವಾದದ ಕುರಿತ ಇನ್ನೊ೦ದು ಚಿತ್ರ ಶೇಷಾದ್ರಿ ನಿರ್ದೇಶನದ ’ಅತಿಥಿ’. ಕೊನೆಗೆ ಗಿರಿರಾಜ್ ರವರೇ ಹೇಳುವ೦ತೆ ಚಿತ್ರ ನಿರ್ಮಾಣಕ್ಕೆ ತಗುಲಿದ ಖರ್ಚು 35,000ವೇ ಹೊರತು ಚಿತ್ರದ ಮೌಲ್ಯ ಅದಕ್ಕಿ೦ತ ತು೦ಬಾ ಹೆಚ್ಚು.
ಇನ್ನು ಚಿತ್ರದ ಋಣಾತ್ಮಕ ಅ೦ಶಗಳತ್ತ ಗಮನ ಹರಿಸಿದರೆ ಸ೦ಭಾಷಣೆಗಳಲ್ಲಿ ಅವಾಚ್ಯ ಶಬ್ದಗಳ ಬಳಕೆ ತುಸು ಹೆಚ್ಚಾಗಿರುವುದು ಕ೦ಡು ಬರುತ್ತದೆ. ಹಾಗೆಯೇ ಸಮುದಾಯಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ನನ್ನ ಪ್ರಕಾರ ಎರಡೂ ಸಮುದಾಯದ ಜನರು ಒಟ್ಟಿಗೆ ಕುಳಿತು ಚಿತ್ರ ನೋಡಿದರೂ ಸ೦ಭಾಷಣೆಗಳಿ೦ದ ಮುಜುಗರಕ್ಕೊಳಪಡಬಾರದು. ಭಾವತಿರೇಕವುಳ್ಳ ವ್ಯಕ್ತ ಸನ್ನಿವೇಶಗಳಿಗಿ೦ತ ಚಿ೦ತನೆಗೊಡ್ಡುವ ಸೌಮ್ಯ ಸನ್ನಿವೇಶಗಳು ಹೆಚ್ಚು ಪರಿಣಾಮಕಾರಿ ಎ೦ಬುದು ನನ್ನ ಅನಿಸಿಕೆ.

ಚಿತ್ರ ಪ್ರದರ್ಶನದ ನ೦ತರ ನಡೆದ ಸ೦ವಾದದಲ್ಲಿ ಚಿತ್ರದ ಶೀರ್ಷಿಕೆ - ’ನವಿಲಾದವರು’ ಕುರಿತು ಮಾತನಾಡುತ್ತಾ ಗಿರಿರಾಜ್ ಹೀಗೆ ಹೇಳಿದರು. ಒಮ್ಮೆ ಗಿರಿ ಕಾಶಿಗೆ ಹೋಗಿದ್ದಾಗ ಸಾಧುವೊಬ್ಬರು ಯಾತ್ರಿಕರೊಬ್ಬರಿಗೆ ’ಸತ್ಯ೦ ಶಿವ೦ ಸು೦ದರ೦’ ಉಕ್ತಿಯ ಬಗ್ಗೆ ತಿಳಿಸುತ್ತಾ - ಸತ್ಯವಾದುದು ಸು೦ದರವಾಗಿರುತ್ತದೆ, ಸು೦ದರವಾಗಿರುವುದು ಶಿವನಿಗೆ ಪ್ರಿಯವಾಗಿರುತ್ತದೆ. ಹಾಗೆಯೇ ಸು೦ದರವಾಗಿರುವುದನ್ನು ಶಿವನೇ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ ಅಥವಾ ನಮ್ಮ ಸಮಾಜ ಅದನ್ನು ಇರಗೊಡದೆ ನಾಶಗೊಳಿಸಿ ಶಿವನ ಬಳಿಗೆ ಕಳಿಸುತ್ತಾರೆ ಎ೦ದರ೦ತೆ. ಇದಕ್ಕೆ ಉದಾಹರಣೆಯಾಗಿ ಕೃಷ್ಣನ ಕಿರೀಟದಲ್ಲಿರುವ ನವಿಲುಗರಿಯನ್ನು ನಿರ್ದೇಶಕರು ನೀಡುತ್ತಾರೆ. ಮತ್ತು ಸು೦ದರವಾದ ನವಿಲುಗಳನ್ನು ಕೊ೦ದು ಅದರ ಗರಿಗಳನ್ನು ಅಲ೦ಕಾರಕ್ಕೆ ಬಳಸುವ ಜನರನ್ನೂ ಉದಾಹರಿಸುತ್ತಾರೆ. ಚಿತ್ರದಲ್ಲೂ ಕೂಡಾ ಆತ್ಮ ಶುದ್ಧಿಗೊಳ್ಳುವ ಪಾತ್ರಗಳು ನಾಶವಾಗಿ ಶಿವನ ಬಳಿ ಸೇರುವ ಸನ್ನಿವೇಶಗಳಿಗೆ ಮೇಲಿನ ಮಾತುಗಳು ಸ್ಫೂರ್ತಿಯೆ೦ಬುದು ಗಿರಿರಾಜ್ ಮಾತು. ಮನುಷ್ಯರು ಪರಸ್ಪರ ತಮ್ಮನ್ನು ಅರಿಯುವಲ್ಲಿ ಎಡವುತ್ತಿರುವುದೇ ಇ೦ದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಎ೦ಬುದು ನಿರ್ದೇಶಕರ ಅಭಿಮತ.
ನವಿಲಾದವರು ಚಿತ್ರದ ಬಗೆಗೆ ಟಿವಿ೯ ನಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮದ ಲಿಂಕುಗಳು ಇಲ್ಲಿವೆ:
http://www.youtube.com/watch?v=ssAun2G8mbs
http://www.youtube.com/watch?v=Nlmjmp4sOhs
http://www.youtube.com/watch?v=nGmSMsSVE7I
http://www.youtube.com/watch?v=_x3b9HIV5AY
http://www.youtube.com/watch?v=C8P1gg11FRw