ದೃಶ್ಯಕ್ಕೊಂದು ನುಡಿಗಟ್ಟು

ಮೈನಾ: ಚಿತ್ರ ವಿಮರ್ಶೆ

ತಮಿಳುನಾಡಿನ ಹಳ್ಳಿಗಳ ಜೀವನಶೈಲಿಯನ್ನು ಆಧರಿಸಿ, ಅಲ್ಲಿಯದೇ ಆಡುಭಾಷೆ ಬಳಸಿ ಮಾಡಿರುವ ತಮಿಳು ಚಿತ್ರಗಳ ಪೈಕಿ ನನಗೆ ನೆನಪಿರುವುದು, ಆಮೀರ್ ಸುಲ್ತಾನ್ ನಿರ್ದೇಶನದ  ಪರತ್ತಿವೀರನ್ ಚಿತ್ರ, ಅದೇ ಸಾಲಿನಲ್ಲಿ ಸೇರಿಸಬಹುದಾದ ಚಿತ್ರ ಮೈನಾ. ಕತೆಯು, ಹಳ್ಳಿಯ ಜೀವನದ ರೀತಿಯನ್ನು ಪರಿಚಯಿಸುತ್ತ, ಪ್ರಕೃತಿಯ ಸೊಬಗನ್ನು ಬಿಂಬಿಸುತ್ತದೆ.  ಅಲ್ಲದೆ, ಅನೇಕ ಸೂಕ್ಷ್ಮಗಳನ್ನು ಒಳಗೊಂಡಿದೆ. ಪ್ರತಿ ದೃಶ್ಯದಲ್ಲೂ ಪ್ರೇಕ್ಷಕನ  ಊಹೆಯ ಜೊತೆ ಸೆಣೆಸಾಡಿ, ಎಲ್ಲದರ ಮೊತ್ತವೆಂಬಂತೆ ಸಿನಿಮಾ, ಪ್ರೇಕ್ಷಕನ ಊಹೆಗೂ ಮೀರಿ  ಪರಿಣಾಮಕಾರಿಯಾದ ಕ್ಲೈಮ್ಯಾಕ್ಸನ್ನು ಹೊಂದಿದೆ. ಪ್ರತಿ ಪಾತ್ರವನ್ನು ಅದರ  ಮನೋಸ್ಥಿತಿಯನ್ನು ನಮಗೆ ಕಟ್ಟಿಕೊಡುವ ದೃಶ್ಯಗಳಂತು ಅತ್ಯುತ್ತಮ.

 ಸಿನಿಮಾದ ಎಳೆ ಸಾಮಾನ್ಯ ಪ್ರೇಮಕತೆ, ಜಗತ್ತಿನಲ್ಲಿ ಎಲ್ಲ ಕತೆಯೂ ಹೇಳಲ್ಪಟ್ಟಿದೆ, ಹೇಳುವ ರೀತಿಯಲ್ಲಿ ಅಷ್ಟೇ ಹೊಸತನವನ್ನು ತರಲಾಗುವುದು ಎನ್ನಲಾಗಿದೆ, ಮೈನಾ ಇದಕ್ಕೊಂದು  ಉತ್ತಮ ಉದಾಹರಣೆ. ಚಿತ್ರದ ಸತ್ವವೆಲ್ಲ ಇರುವುದು ನಿರೂಪಣೆಯಲ್ಲಿ, ನಿರ್ದೇಶಕ ಇಡೀ  ಕತೆಯನ್ನು ಹೊಸತಾಗಿ ಕಟ್ಟಿಕೊಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆನ್ನಬಹುದು.  ಸಿನಿಮಾದ ಮೊಟ್ಟ ಮೊದಲನೆಯ ದೃಶ್ಯಕ್ಕೂ ಕೊನೆಯ ನಿಮಿಷದ ದೃಶ್ಯಕ್ಕೂ ಮಧ್ಯೆ ಬಂದಿರುವ  ಅಷ್ಟೂ ದೃಶ್ಯಗಳು ಒಂದಕ್ಕೊಂದು ಹೇಗೆ ತಾಳೆಹಾಕಿಕೊಂಡಿವೆ ಎಂದು ತಿಳಿಯುವುದು ಕಡೆಯ  ದೃಶ್ಯದ ನಂತರವೇ!

 ಇಡೀ ಸಿನಿಮಾ ನಡೆಯುವುದು ಒಂದೇ ದಿನದಲ್ಲಿ ನಡೆಯುವ ಘಟನೆಗಳನ್ನಾಧರಿಸಿ. ಕತೆಗೆ ಪೋಷಕವಾಗಿ ಶುರುವಿನಲ್ಲಿ ಮೂವತ್ತು ನಿಮಿಷದ ಫ್ಲ್ಯಾಶ್ ಬ್ಯಾಕ್ ಬಿಟ್ಟರೆ ಉಳಿದ ಒಂದೂವರೆ ತಾಸಿನಷ್ಟು ಸಿನಿಮಾ ಕತೆಯು ದೀಪಾವಳಿಯ ಮುಂಚಿನ 24 ಗಂಟೆಗಳು ಇಬ್ಬರು ಪೋಲೀಸ್ ಆಫೀಸರ್ ಮತ್ತು ಇಬ್ಬರು ಪ್ರೇಮಿಗಳ ಸುತ್ತಲೇ  ಸುತ್ತುತ್ತದೆ. ಮಗಳನ್ನು ತನಗೆ ಮದುವೆ ಮಾಡಿ ಕೊಡುವುದಿಲ್ಲ ಎಂದು ಹೇಳಿದ ಹೆಂಗಸಿಗೆ ಇಟ್ಟಾಡಿಸಿ ಹೊಡೆದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಲು ಹೋದ ಎಂಬ ಆರೋಪವನ್ನು ಹೊತ್ತು ಜೈಲು ಸೇರಿದ್ದ ಹೀರೋ ತನ್ನ ಪ್ರೇಯಸಿಯನ್ನು ಬೇರೆ ಯಾರೋ ಮದುವೆ ಮಾಡಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದು ಜೈಲಿನಿಂದ ಪರಾರಿಯಾಗುತ್ತಾನೆ. ಇತ್ತ ಹೊಸದಾಗಿ ಮದುವೆಯಾಗಿರುವ ಜೈಲರು ತನ್ನ
 ಸಿಡುಕು ಹೆಂಡತಿಗೆ ಇನ್ನೆರೆಡು ಗಂಟೆಯಲ್ಲಿ ಬಂದು ಅವಳನ್ನು ತವರಿಗೆ ಮದುವೆಯಾದ ಮೊದಲ ದೀಪಾವಳಿಗೆ (ತಲದೀಬಾವಳಿ) ಕರೆದೊಯ್ಯುವುದಾಗಿ ಮಾತು ಕೊಟ್ಟು ಬಂದಿರುತ್ತಾನೆ,ಅದಾಗಲೆ ಜೈಲಿನಲ್ಲಿ ನಡೆದ ಸಮಾರಂಭದಿಂದ ತಡವಾಗಿ ಹೆಂಡತಿ ಮತ್ತೆ ಮತ್ತೆ ಫೋನ್ ಮಾಡಿ ಕಾಡಿಸುತ್ತಿರುತ್ತಾಳೆ ಇದರಿಂದ ತಲೆಬಿಸಿಯಾಗಿದ್ದ ಅವನಿಗೆ  ಪರಾರಿಯಾಗಿರುವ ಖೈದಿ ಸಿಗದೆ ಹೋದರೆ ಅಲ್ಲಿರುವ ಎಳೂ ಜನ ಪೋಲೀಸರುಗಳ ಕೆಲಸಕ್ಕೆ ಕುತ್ತು ಬರುವ
 ಸಂಭವವೇರ್ಪಟ್ಟಿದೆ ಎಂದು ತಿಳಿದು ಇನ್ನಷ್ಟು ತಲೆಕೆಡುತ್ತದೆ. ಪರಾರಿಯಾದ ಖೈದಿಯ ಮೇಲೆ ಕುತ್ತಿಗೆವರೆಗೂ ಸಿಟ್ಟಿಟ್ಟುಕೊಂಡು ಇನ್ನೊಬ್ಬ ಪೇದೆಯ ಜೊತೆ ಖೈದಿಯನ್ನು ಹುಡುಕುತ್ತಾ ಹೊರಡುತ್ತಾನೆ. ಈ ಮಧ್ಯೆ ಕಾಯುತ್ತಿರುವ ಹೆಂಡತಿಗೆ ಮತ್ತು ಅವಳ ಮನೆಯವರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಹೋಗಿ ಆಗದೆ ಸುಮ್ಮನಾಗುತ್ತಾನೆ.

 ಇತ್ತ ಖೈದಿ ಓಡಿಬಂದು ತನ್ನ ಪ್ರೇಯಸಿ (ಮೈನಾ) ಯ ಅಮ್ಮನಿಗೆ ಮತ್ತೆ ಒದ್ದು ಮೈನಾಳನ್ನು ಕರೆದೊಯ್ಯುತ್ತಿರುವ ಸಂಧರ್ಭದಲ್ಲೇ ಅವನನ್ನು ಹುಡುಕಿಕೊಂಡು ಬಂದ ಪೋಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಅಲ್ಲಿ ನಡೆಯುವ ಗಲಾಟೆಯಲ್ಲಿ ಮೈನಾ ಕೂಡ ಅವನ ಜೊತೆ ಹೊರಟು ಬರುತ್ತಾಳೆ. ನಾಲ್ವರು ಮತ್ತೆ ಜೈಲಿನವರೆಗೂ ಬರುವುದೇ ಕತೆ. ನಾಯಕನು ಮೈನಾಳಿಗೋಸ್ಕರ ಬಂದಿದ್ದರೂ, ಕತೆಯು ಹೇಗೆ ಅವಳನ್ನೇ ಕೇಂದ್ರವಾಗಿರಿಸಿಕೊಂಡು ಮುಂದುವರೆದು ಮುಗಿಯುತ್ತದೆ ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.

 ಸಿನಿಮಾ ನೋಡುತ್ತಾ ನೋಡುತ್ತಾ ಪಾತ್ರಗಳು ಯಾವಾಗ ಆಪ್ತವಾಗಿಬಿಡುತ್ತದೋ ನಮಗೆ  ತಿಳಿಯುವುದಿಲ್ಲ. ಆದರೆ ನಿರ್ದೇಶಕ, ಪ್ರೇಕ್ಷಕನ ಎಮೋಷನ್ ಗಳನ್ನು ಪರಿಗಣಿಸದೆ ಕತೆಯ  ಪಾತ್ರಗಳ ಬಗ್ಗೆ ನಿರ್ಭಾವುಕವಾಗೇ ಉಳಿದು ಪರಿಣಾಮಕಾರಿಯಾದ ಕೊನೆಯನ್ನು  ಕೊಟ್ಟಿದ್ದಾರೆ. ಹೀಗಾಗಿ ಕತೆಯು ಎಲ್ಲಿಯೂ ಕ್ಲೀಷೆಯೆನಿಸುವುದಿಲ್ಲ. ಚಿತ್ರವು  ಅಚ್ಚುಕಟ್ಟಾಗಿದೆ, ಫ಼್ರತಿಯೊಂದು ಫ್ರೇಮನ್ನೂ ಏಕಾಗ್ರತೆಯಿಂದ ಮೂಡಿಸಿರುವುದು ನೋಡುತ್ತಲೇ ತಿಳಿಯುತ್ತದೆ. ಹಳ್ಳಿಯ ಹಸಿರು, ನಾಯಕನ ಹುಚ್ಚು ಒರಟು ಫ಼್ರೇಮ, ನಾಯಕಿಯ ಎಳಸು ಕಂಗಳು ಎಲ್ಲವೂ ಅದೆಷ್ಟು ಚೆನ್ನಾಗಿ ಮೂಡಿಬಂದಿದೆಯೆಂದು ನೀವು ಚಿತ್ರ ನೋಡಿಯೇ  ತಿಳಿಯಬೇಕು.

 ಗ್ರಾಮೀಣ ತಮಿಳು ಬಳಸಿದ್ದರೂ ಬಹಳಷ್ಟು ಪಾಲು ಕತೆಯನ್ನು ನಾವು ದೃಶ್ಯಗಳಲ್ಲೆ ತಿಳಿಯಬಹುದು. ನಿಮಗೆ ತಮಿಳು ಬರುತ್ತದೆಯಾದರೇ ಈ ಚಿತ್ರವನ್ನು ತಪ್ಪದೇ ನೋಡಿ, ಬರದಿದ್ದರೂ ನೋಡಿ ನಿಮಗೆ ನಿರಾಶೆಯಾಗದು. It is worth watching more than once.

15-12-10


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು