`
ಕಳೆದ ತನ್ನ ಮೂರು ಸಿನಿಮಾಗಳಿಂದ ತೆಲುಗು ಚಿತ್ರರಂಗದಲ್ಲಿ ಸುದ್ದಿಯಲ್ಲಿರುವಂತ ನಿರ್ದೇಶಕ. ಈ ಮೂರು ಸಿನಿಮಾಗಳು ಮೂರು ವಿಭಿನ್ನ ಕಾರಣಗಳಿಂದಾಗಿ ಸಾಕಷ್ಟು ಸುದ್ದಿ ಮಾಡಿದಂತಹ ಸಿನಿಮಾಗಳು.
1) ರಕ್ತಚರಿತ್ರ ಭಾಗ ೧ ಮತ್ತು ೨,
2) ಅಪ್ಪಲರಾಜು,
3) ದೊಂಗಲಮುಠಾ
_________________________________
೧) ರಕ್ತಚರಿತ್ರ ೧,೨ :
ಈ ಸಿನಿಮಾ ಒಂದೇ ಕಥೆಯ ಎರೆಡು ಭಾಗಗಳು... ನಿಜ ಜೀವನದ ವ್ಯಕ್ತಿಗಳನ್ನಾದರಿಸಿದ ಕಥೆಗಳು ಭಾರತೀಯ ಚಿತ್ರರಂಗದಲ್ಲಿ ತುಂಬಾ ವಿರಳ. ಬಂದಿರುವಂತಹ ಸಿನಿಮಾಗಳಲ್ಲಿ ಆದರ್ಶೀಯ ವ್ಯಕ್ತಿಗಳ ಕಥೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕ್ರಿಮಿನಲ್ ಹಿನ್ನಲೆ ಇರುವಂತಹವರದು ಕಡಿಮೆಯೇ ಎನ್ನಬಹುದು. ಅದರಲ್ಲಿ ಪೂಲನ್ ದೇವಿ, ಬಿಲ್ಲಾ ರಂಗ, ವಿವಾದಗಳಿಗೆ ಹೆಸರಾಗಿರುವ ಬಾಳಾಠಾಕ್ರೆ, ೭೦-೮೦ ರ ದಶಕದಲ್ಲಿ ಬಾಂಬೆಯಲ್ಲಿದ್ದ ವರದರಾಜನ್ ಮೊದಲಿಯಾರ್ ನ ಸಿನಿಮಾಗಳನ್ನು ಉದಾಹರಿಸಬಹುದು.
ಅಂತಹುದೇ ಹಿನ್ನಲೆಯಲ್ಲಿ ಕ್ರಿಮಿನಲ್ ಹಿನ್ನಲೆಯ ಆಂಧ್ರದ ಪೆರಟಾಲ ರವಿಯ ಜೀವನ್ನಾದರಿಸಿ ಮಾಡಿರುವ ಸಿನಿಮಾ ರಕ್ತ ಚರಿತ್ರ.
ಈ ಸಿನಿಮಾ ಹಲವು ವರ್ಷಗಳ ಹಿಂದೆ ಬಂದಂತಹ ಮಣಿರತ್ನಂರ ನಾಯಗನ್ ಸಿನಿಮಾದಂತೆಯೇ ಅನ್ಯಾಯಕ್ಕೊಳಗಾದ ವ್ಯಕ್ತಿಯೊಬ್ಬ ತನಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಲುವುದರ ಜೊತೆಗೆ ನಾಯಕನಾಗಿ ಬೆಳೆಯುವ ಕಥೆ ಇದ್ದರೂ ನಾಯಗನ್ ನಂತೆ ಬರೀ ನಾಯಕನಾಗಿ ಉಳಿಯದೇ.. ರಾಜಕೀಯಕ್ಕೂ ಬರುತ್ತಾನೆ. ರಾಜಕೀಯ ಬಲದ ಮೂಲಕ ತನ್ನ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. 
ಇಡೀ ನಾಯಗನ್ ಸಿನಿಮಾ ಕಥೆಯು ನಾಯಕನು ದುರ್ಬಲರಿಗೆ ಸಹಾಯ ಮಾಡುವ ಸಲುವಾಗಿ, ಹೋರಾಟ ನಡೆಸುವ ವ್ಯಕ್ತಿಯ ಸುತ್ತಾ ನಡೆಯುವ ಘಟನಾವಳಿಗಳ ಮೂಲಕ ಆ ನಾಯಕ ಮಾಡುವ ಪ್ರತಿ ಕೆಲಸದ ಹಿಂದೆಯೂ ಒಂದು ಸಾತ್ವಿಕ ಭಾವನೆ ಉದ್ದೀಪಸುವಂತೆ ದೃಶ್ಯಗಳನ್ನು ಕಟ್ಟಿಕೊಡುವುದರ ಮೂಲಕ ವ್ಯಕ್ತಿ ಕೇಂದ್ರಿತ ಸಿನಿಮಾ ಆಗುವುದರಲ್ಲೇ ಸಾಗುತ್ತದೆ.
ಇಂತಹ ಸಿನಿಮೀಯ ಅಂಶಗಳಿಲ್ಲದ ಪಕ್ಕಾ ಕಚ್ಚಾ ದೃಶ್ಯಗಳನ್ನು ಕಟ್ಟಿಕೊಡುವುದು ’ರಕ್ತ ಚರಿತ್ರ’ ಸಿನಿಮಾ. ಕಥೆಯ ಪ್ರಾರಂಭದಲ್ಲಿ ಇದು ನಾಯಕ ಕೇಂದ್ರಿತ ಸಿನಿಮಾ ಆಗಲಿದೆ ಎಂಬ ಭಾವನೆ ಪ್ರೇಕ್ಷಕರಿಗೆ ಕಟ್ಟಿಕೊಡುತ್ತಲೇ, ನಡೆಯುತ್ತಿರುವ ಪ್ರತಿ ಘಟನೆಗಳ ಹಿಂದೆ ಇರುವ ವ್ಯವಸ್ಥೆಯ ಅನಾವರಣಗೊಳಿಸುತ್ತಾ ಸಾಗುತ್ತದೆ. ಸಿನಿಮಾದ ಮೂಲ ಕಥೆಯಲ್ಲಿನ ವ್ಯವಸ್ಥೆ ಎಂಬ ಅಮೂರ್ತ ಪಾತ್ರ, ಮೇಲ್ನೋಟಕ್ಕೆ ಕಾಣುವ ಪಾತ್ರಗಳ ಹಿಡಿತದಲ್ಲಿರುವಂತೆ ಕಂಡರೂ, ವ್ಯವಸ್ಥೆ ಮತ್ತು ಅದರ ವ್ಯಾಪ್ತಿಯ ಜಟಿಲ ಹೆಣಿಗೆಯಲ್ಲಿ ಪಾತ್ರಗಳು ಸಿಕ್ಕು ಒದ್ದಾಡುವುದನ್ನು ಸಿನಿಮಾ ಘಟನಾವಳಿಗಳ ಮೂಲಕ ಕಟ್ಟಿ ಕೊಡುತ್ತಾನೆ. ಉದಾ: ತನ್ನ ತಂದೆ ಮತ್ತು ಅಣ್ಣನ ಸಾವಿಗೆ ಪ್ರತೀಕಾರವಾಗಿ
ನರಸಿಂಹಾರೆಡ್ಡಿಯನ್ನು ಮತ್ತು ನಾಗಮಣಿ ರೆಡ್ಡಿಯನ್ನು ಕೊಲ್ಲುವ ರವಿ, ಬಾಬು ಎಂಬ ಅಸಹಾಯಕ ಟೈಲರ್ ಎಂಬ ಕೆಳ ಹಂತದ ವ್ಯವಸ್ಥೆ ಮತ್ತು ಜನರಲ್ಲಿ ತನ್ನ ನಟನೆಯ ಮೂಲಕ ಅಪಾರ ಹೆಸರುಗಳಿಸಿದ್ದರೂ ಒಬ್ಬ ವ್ಯಕ್ತಿಯಿಂದಾಗಿ ತನ್ನ ego hurt ಮಾಡಿಕೊಂಡ ಶಿವಾಜಿ ಎಂಬ ಮೇಲುಸ್ತರದ ವ್ಯವಸ್ಥೆಯನ್ನು ಸಂಪರ್ಕಿಸುವ ಕೊಂಡಿಯಾಗಿ, ವ್ಯವಸ್ಥೆಯ ರೂಪಕವಾಗಿ ಆ ಎರೆಡೂ ಸ್ತರಗಳಿಗೆ ತೊಂದರೆಯಂತಿದ್ದ ಬುಕ್ಕಾರೆಡ್ಡಿಯನ್ನು ಕೆಳಸ್ತರದ ಬಾಬುವಿನ ಮೂಲಕ ಮುಖ್ಯಮಂತ್ರಿಯ ಬೆಂಬಲದಲ್ಲಿ ಕೊಲ್ಲಿಸುತ್ತಾನೆ.
ವ್ಯವಸ್ಥೆಯೊಳಗಿನ ಇಂತಹ ಸಂಘರ್ಷಗಳನ್ನ ಕೇಂದ್ರಿಕರಿಸಿ ಮಾಡಿರುವ ಭಾರತೀಯ ಸಿನಿಮಾಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಘರ್ಷಣೆ ಯಾವಾಗಲೂ ವ್ಯಕ್ತಿ ಕೇಂದ್ರೀಕೃತವಾಗಿ ನಡೆಯುತ್ತಿರುತ್ತವೆ. ಅಲ್ಲಿ ಸಮಾಜದ ವಿವಿಧೆಡೆಗಳಲ್ಲಿನ ಸೂಕ್ಷ್ಮ ನಡೆಗಳು ಮರೆಯಾಗಿರುತ್ತವೆ. ಅಂತಹ ನೇರ ನಿರೂಪಣೆ ರಕ್ತ ಚರಿತ್ರದಲ್ಲಿ ಕಾಣಬರುವುದಿಲ್ಲವಾದರೂ, ಅಲ್ಲಿಯೂ ಕೂಡ ಸಮಾಜದ ವಿವಿಧ ವರ್ಗದ ನಡೆ, ಹೋರಾಟಗಳು ಎಲ್ಲೂ ಮುಖ್ಯವಾಗುವುದೇ ಇಲ್ಲ. ಮುಂದುವರೆಯುತ್ತದೆ...
28-03-2011
tags:ರಾಮ್ ಗೋಪಾಲ್ ವರ್ಮಾ, ram gopal varma, rakta charitra, dongala mutha, appalarju,ಪೆರಟಾಲ ರವಿ,ಬಾಳಾಠಾಕ್ರೆ,ರಕ್ತ ಚರಿತ್ರ’ ಸಿನಿಮಾ, samvaada.com
