ಬೆಟ್ಟದ ಜೀವ: ಕಾದಂಬರಿಯ ಅರ್ಥಪೂರ್ಣ ವಿಸ್ತರಣೆ
ಆಧುನಿಕ ಪ್ರಜ್ಞೆಯ ಶಿವರಾಮ ಅಕಸ್ಮಾತ್ತಾಗಿ ಗೋಪಾಲಯ್ಯನ ಅತಿಥಿಯಾಗುವ ಪ್ರಸಂಗ ಅವನ ಜೀವನದೃಷ್ಟಿಯನ್ನೇ ಬದಲಿಸುವಂತದ್ದು. ಒಂದು ಸಾಮಾಜಿಕ ಚಳುವಳಿಯಲ್ಲಿ ಸಕ್ರೀಯನಾದ ಶಿವರಾಮು ಕೌಟುಂಬಿಕ ಮೌಲ್ಯಗಳು, ಅದರೊಳಗಿನ ಸಂಕಟಗಳನ್ನೂ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ವೃದ್ಧ ದಂಪತಿಗಳನ್ನ ಬಿಟ್ಟು ಹೋಗಿರುವ ಮಗನೂ ಸ್ವಾತಂತ್ರ್ಯ ಚಳುವಳಿಯ ಪಾಲುದಾರನಾಗಿರಬಹುದೆಂಬ ಅನುಮಾನ ಶಿವರಾಮನಿಗೂ, ಪ್ರೇಕ್ಷಕನಿಗೂ ಉಂಟಾಗುತ್ತದೆ. ಶಿವರಾಮನಲ್ಲಿ ಈ ಅನುಮಾನ , ಬದುಕಿನ ಇನ್ನೊಂದು ಸತ್ಯವನ್ನೂ ತೆರೆದಿಡುತ್ತದೆ. ಸಾಮಾಜಿಕ ಚಳವಳಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿನ ಕೌಟುಂಬಿಕ ದುರಂತಗಳನ್ನ ಈ ಚಿತ್ರ ಧ್ವನಿಪೂರ್ಣವಾಗಿ ಗುರುತಿಸುತ್ತದೆ. ಇದು ನಿರ್ದೇಶಕನ ಗೆಲುವು. ಬೆಟ್ಟದ ಜೀವದ ಕಥಾನಕವನ್ನ ಶೇಷಾದ್ರಿಯವರು ವಿಸ್ತರಿಸಿರುವ ರೀತಿ ಮೆಚ್ಚಿಗೆಗೆ ಅರ್ಹವಾಗಿದೆ. ಬೆಟ್ಟದ ಜೀವ ಕಾದಂಬರಿಯನ್ನ ಎಳೆಯ ದಿನಗಳಲ್ಲಿ ಓದಿ ಮುಗಿಸಿದ್ದಾಗ , ಮಗನನ್ನು ಹುಡುಕಿ ಹೊರಟ ಗೋಪಾಲಯ್ಯ ಏನಾದ ಎಂಬ ಪ್ರಶ್ನೆ ಬಹುವಾಗಿ ಕಾಡಿತ್ತು. ಆತ ಮರಳಿ ಬರುತ್ತಾನೆಯೇ? ಮಗ ದೂರವಾದಂತೆ, ಆ ವೃದ್ಧೆಯ ಪತಿಯೂ ದೂರವಾಗುತ್ತಾನಾ? ಇಲ್ಲ ಮಗನನ್ನ ಕರೆದುಕೊಂಡು ಮರಳಿ ಬರುತ್ತಾನಾ? ಈ ಹಿನ್ನೆಲೆಯಲ್ಲಿ ಬೆಟ್ಟದ ಜೀವದ ಕ್ಲೈಮ್ಯಾಕ್ಸ್ ಕೂಡ ಬಹು ಮುಖ್ಯವೆನಿಸುತ್ತದೆ. ಕೌಟುಂಬಿಕ ಮಟ್ಟದಲ್ಲಿ ಗೋಪಾಲಯ್ಯನ ಸಂಸಾರದಲ್ಲಿ ಏನೇ ಆಗಿದ್ದರೂ, ಆ ಸ್ಥಳವೀಗ ರೆಸಾರ್ಟ್ ಆಗಿ ಮಾರ್ಪಟ್ಟಿದೆ ಎನ್ನುವ ಸತ್ಯ ಚಿತ್ರವನ್ನ ತೀರಾ ಪ್ರಸ್ತುತವಾಗಿಸುತ್ತದೆ.
ಈ ಚಿತ್ರದಲ್ಲಿ ನನಗೆ ಇನ್ನೂ ಒಂದು ಕೌತುಕದ ವಿಷಯವೆಂದರೆ, ಶಿವರಾಮು ಹುಲಿಯನ್ನು ಸಾಯಿಸದಂತೆ ಯಾಕೆ ತಡೆಯುತ್ತಾನೆ? ಎಂಬುದು. ಶಿವರಾಮುವಿನ ಪಾತ್ರ ಹೇಗೆ ಇದನ್ನು ಜಸ್ಟಿಫೈ ಮಾಡುತ್ತದೆ? ಚಿತ್ರದ ಆರಂಭದಿಂದಲೂ ಶಿವರಾಮುವಿಗೆ ಹುಲಿಯ ಕನಸು ಬರುತ್ತಿರುತ್ತದೆ. (ಅದನ್ನ ಬ್ರಿಟಿಷ್ ದಬ್ಬಾಳಿಕೆಯ ರೂಪಕವೆಂದಾದರೂ ಅಂದುಕೊಳ್ಳೋಣ), ಶಿವರಾಮು , ಗೋಪಾಲಯ್ಯನ ಮನೆಯ ಆಶ್ರಯ ಪಡೆಯುವುದು ಕೂಡ ಹುಲಿಯ ಹೆದರಿಕೆಯಿಂದಾಗಿಯೇ, ಚಿತ್ರದ ಕಾಲ ಕೂಡ ಈಗಿನಂತೆ "ಸೇವ್ ಟೈಗರ್ಸ್" ಸ್ಲೋಗನ್ ದ್ದ್ದಲ್ಲ. ಹಾಗಿದ್ದೂ ಶಿವರಾಮು ಏಕೆ ಹುಲಿಯ ಬೇಟೆಯನ್ನ ವಿರೋಧಿಸುತ್ತಾನೆ? ಒಂದು ಕ್ಷಣ ನಿರ್ದೇಶಕ ತನ್ನ ನಿಲುವನ್ನು ಪಾತ್ರದ ಮೇಲೆ ಹೇರಿದ್ದಾನೆಯೇ? ಎಂದೂ ಅನಿಸದಿರದು. ಆದರೆ ಈ ನಿರಾಕರಣೆ, ನಾನು ಮೇಲೆ ಹೇಳಿದ ಶಿವರಾಮುವಿನ ಬದಲಾಗುತ್ತಿರುವ ಮನೋಭಾವ ಅಥವಾ ಆತನ ಅಂತರಂಗದೊಳಗೆ ಆರಂಭವಾಗಿರುವ ತಾಕಲಾಟಗಳೆಂದಾದರೂ ಅಂದುಕೊಳ್ಳಬಹುದು. ಸ್ವಾತಂತ್ರ್ಯ ಚಳುವಳಿಯ ಕಾವಿನಲ್ಲಿರುವ ಶಿವರಾಮುವಿನ ಮೇಲೆ, ಗೋಪಾಲಯ್ಯನ ಮನೆ ಪರಿಸರ ಅವನನ್ನ ಇನ್ನಷ್ಟು ಮಾನವೀಯನಾಗಿಸುತ್ತದೆ; ಪ್ರಬುದ್ಧನಾಗಿಸುತ್ತದೆ. ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳೊಳಗಿನ ಅವಿನಾಭಾವ ಸಂಬಂಧವನ್ನೂ ಈ ಚಿತ್ರ ಸೂಚ್ಯವಾಗಿ ಹೇಳುತ್ತದೆ. ಹೀಗಿದ್ದೂ ಶೇಷಾದ್ರಿಯವರ ಬೆಟ್ಟದ ಜೀವದ ಸಮಸ್ಯೆಯಿರುವುದು , ಚಿತ್ರದೊಳಗಿನ ಧ್ವನಿ , ಪ್ರಕಟಗೊಳ್ಳದಿರುವುದು. ಚಿತ್ರ ಕೃತಿಯೊಳಗಿನ ಧ್ವನ್ಯಾರ್ಥಗಳು , ದೃಶ್ಯ ರೂಪದಲ್ಲಿ ಪ್ರಕಟವಾಗದಿದ್ದಾಗ ಅದು ಪ್ರೇಕ್ಷಕನ ಅನುಭವವಾಗಿಸುವಲ್ಲಿ ಸೋಲುತ್ತದೆ. ಕಾರಂತರ ಬೆಟ್ಟದ ಜೀವವನ್ನ, ಶೇಷಾದ್ರಿಯವರ ಬೆಟ್ಟದ ಜೀವ ಅರ್ಥಪೂರ್ಣವಾಗಿ ವಿಸ್ತರಿಸಿದೆ.
18-07-2011
ಇಲ್ಲಿವರೆಗಿನ ಅಭಿಪ್ರಾಯಗಳು |
|
2011-07-18 09:30:11
"ಕಾರಂತರ ಬೆಟ್ಟದ ಜೀವವನ್ನ, ಶೇಷಾದ್ರಿಯವರ ಬೆಟ್ಟದ ಜೀವ ಅರ್ಥಪೂರ್ಣವಾಗಿ ವಿಸ್ತರಿಸಿದೆ." ಎನ್ನುವ ನಿಮ್ಮ ಸಾಲುಗಳೇ ಇಡೀ ಚಿತ್ರದ ಶಕ್ತಿಯನ್ನು ಬಿಂಬಿಸುತ್ತದೆ. ದತ್ತಣ್ಣನವರ ಜೊತೆ ಬಹಳ ಹಿಂದೆ ಒಂದು ಸಿನಿಮಾದಲ್ಲೂ ಕೆಲಸ ಮಾಡಿಬಲ್ಲೆ. ಅವರ ಪ್ರಖರ ಅಭಿನಯ ತಾಕತ್ತಿಗೆ ಎಂಥ ಪಾತ್ರವೂ ಲೀಲಾಜಾಲ. ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ.