"ಬೆಟ್ಟದ ಜೀವ" ಚಲನಚಿತ್ರದ ವಿಶೇಷ ಪ್ರದರ್ಶನಪ್ರಶಸ್ತಿ ವಿಜೇತ ಸಿನಿಮಾ ಚಿತ್ರಮಂದಿರಗಳಿಗೆ ಬರೋಲ್ಲ ನಾವು ನೋಡೋಕೆ ಆಗೋಲ್ಲ ಎನ್ನುವ ಕನ್ನಡ ಪ್ರೇಮಿಗಳಿಗೆ ಸವಿ ಸುದ್ದಿ ಇಲ್ಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ "ಬೆಟ್ಟದ ಜೀವ" ಚಲನಚಿತ್ರದ ವಿಶೇಷ ಪ್ರದರ್ಶನ ಹನುಮಂತನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿವರಾಮಕಾರಂತರ ಕಾದಂಬರಿ ಆಧಾರಿತ ಬಸಂತ್ ಕುಮಾರ್ ಪಾಟೀಲ್ ನಿರ್ಮಾಣದ ಪಿ.ಶೇಷಾದ್ರಿಯವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ "ಬೆಟ್ಟದ ಜೀವ" ಈ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪರಿಸರ ಚಿತ್ರ ಎಂದು ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದ ವಿಶೇಷ ಪ್ರದರ್ಶನವನ್ನು ಅವಿರತ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದ ನಂತರ ಚಿತ್ರ ತಂಡದೂಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಸಂವಾದದಲ್ಲಿ ಚಿತ್ರದ ನಿರ್ದೇಶಕರಾದ ಪಿ.ಶೇಷಾದ್ರಿ ಮತ್ತು ನಟರಾದ ದತ್ತಣ್ಣ, ರಾಮೇಶ್ವರಿ ವರ್ಮ, ಮತ್ತು ಸುಚೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ.
ಪ್ರದರ್ಶನದ ವಿವರ
ದಿನಾಂಕ : 18 ಸೆಪ್ಟೆಂಬರ್ ಭಾನುವಾರ
ಸಮಯ : ಮಧ್ಯಾಹ್ನ 3.00 ಕ್ಕೆ
ಸ್ಥಳ : ಕೆ.ಎಚ್. ಕಲಾಸೌಧ (ರಾಮಾಂಜನೇಯ ಗುಡ್ಡದ ಆವರಣ) ಹನುಮಂತ ನಗರ ಬೆಂಗಳೂರು
ಟಿಕೆಟ್ ಬೆಲೆ : 100 ರೂ ಗಳು.
ಸಂಪರ್ಕಿಸಿ : Ravi Arehalli (samvaada.com) - 99004 39930
ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂಟಿ ಮನೆ, ಬೆಟ್ಟ ಗುಡ್ಡಗಳಲ್ಲಿ ಅಲ್ಲಲ್ಲಿ ಒಂದಿಬ್ಬರು ಜನರು - ಹೀಗೊಂದು ವಿವರಣೆ ಕೇಳಿದಾಗ ನಮ್ಮ ಕಣ್ಮುಂದೆ ಮಲೆನಾಡಿನ ಚಿತ್ರಣ ಬರುವುದು ಖಂಡಿತ. ಸ್ವಾತಂತ್ರ್ಯ ಪೂರ್ವದ ಸಂದರ್ಭ. ಆಗಿನ್ನು ರಸ್ತೆ ಸಂಪರ್ಕವಾಗಲಿ, ಇತರೆ ಸಂಪರ್ಕ ಮಾಧ್ಯಮವಾಗಲಿ ಇಂದಿನಷ್ಟು ವಿಕಾಸವಾಗಿರಲಿಲ್ಲ. ಯಾವುದೋ ಒಂದು ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ವೃದ್ಧ ದಂಪತಿಗಳ ಬಾಳಿನಲ್ಲಿ ಅಪರಿಚಿತನೊಬ್ಬನ ಪ್ರವೇಶವಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಈತ, ಆಂಗ್ಲರ ಕಣ್ತಪ್ಪಿಸಿ ಆ ದಂಪತಿಗಳ ನಡುವೆ ತಲೆ ಮರೆಸಿಕೊಳ್ಳುತ್ತಾ ನೆ. ಇದ್ದೊಬ್ಬ ಮಗ, ಮನೆ ತೊರೆದು ಹೋದಂದಿನಿಂದ ಅವನ ನಿರೀಕ್ಷೆಯಲ್ಲೆ ಇದ್ದ ಆ ವೃದ್ಧ ದಂಪತಿಗಳ ಜೀವನದಲ್ಲಿ ಅಪರಿಚಿತನ ಆಗಮನದಿಂದಾಗುವ ಬದಲಾವಣೆಗಳ ನೈಜ್ಯ ಚಿತ್ರಣವನ್ನು ಈ ಚಿತ್ರದಲ್ಲಿ ಕಾಣಬಹುದು. ಹಾಗೆಯೆ ಆಂಗ್ಲರ ಕಣ್ತಪ್ಪಿಸಿ, ದಟ್ಟ ಕಾನನದಲ್ಲಿ ಕ್ರೂರ ಮೃಗಗಳು, ವಿಷ ಜಂತುಗಳ ನಡುವೆ ಬದುಕುವ ಸವಾಲಿನ ಜೀವನವನ್ನು ಈ ಅಪರಿಚಿತ ಹೇಗೆ ನಿಭಾಯಿಸಬಲ್ಲ ಎಂಬ ಚಿತ್ರಣವೂ ಇಲ್ಲಿದೆ. ಆ ವೃದ್ಧ ದಂಪತಿಗಳ ಮತ್ತು ಅಪರಿಚಿತನ ಮಾನಸಿಕ ವೈರುಧ್ಯ, ಭಿನ್ನ ನಿಲುವುಗಳ ತೊಳಲಾಟ, ದ್ವಂದ್ವಗಳ ಪರಿಕಲ್ಪನೆ - ಹೀಗೆ ವಿವಿಧ ಸನ್ನಿವೇಶದಲ್ಲಿ ಅವರ ನಡವಳಿಕೆಯನ್ನ ನೋಡುಗರ ಮನಸ್ಸಿಗೆ ಹತ್ತಿರದಿಂದ ತಲುಪುವಂತೆ ಮಾಡಿರುವ ಪ್ರಯತ್ನವೇ ಈ ಚಿತ್ರ. 08-09-2001
|
|