ದೃಶ್ಯಕ್ಕೊಂದು ನುಡಿಗಟ್ಟು

ಕುದುರೆಯ ಓಟ ವರ್ಣಿಸುವ ಹಾಡಿನ ಸಾಲುಗಳಲ್ಲಿ ಎರಡೆರಡು ಅರ್ಥವಿದೆ!

chandra270707_12

ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಸಂದ ಈ ಸಂಭ್ರಮದ ಕ್ಷಣದಲ್ಲಿ ಎ ಆರ್ ಮಣಿಕಾಂತರು ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಲೇಖನವೊಂದನ್ನು ಮರು ಪ್ರಕಟಿಸಲಾಗಿದೆ   -ಸಂ.

ಚಿತ್ರ: ಕಾಡು ಕುದುರೆ, ಗೀತೆರಚನೆ, ಸಂಗೀತ: ಚಂದ್ರಶೇಖರ ಕಂಬಾರ, ಗಾಯನ: ಶಿವಮೊಗ್ಗ ಸುಬ್ಬಣ್ಣ, ಕಲ್ಪನಾ ಶಿರೂರು
ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ ||ಪ||

ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ ||೧||

ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ ||೨||

ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||೩||
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರಗೀತೆ- ‘ಕಾಡು ಕುದುರೆ ಓಡಿ ಬಂದಿತ್ತಾ…’ ಇದು, ಡಾ. ಚಂದ್ರಶೇಖರ ಕಂಬಾರ ಅವರ ನಿರ್ದೇಶನದ ‘ಕಾಡುಕುದುರೆ’ ಚಿತ್ರದ ಗೀತೆ. ಈ ಹಾಡಿನಿಂದ, ಗಾಯಕ ಶಿವಮೊಗ್ಗ ಸುಬ್ಬಣ್ಣ ಏಕ್ದಂ ಖ್ಯಾತಿಯ ಶಿಖರವೇರಿಬಿಟ್ಟರು. ಆ ಹಾಡಿನ ಖ್ಯಾತಿ ಎಷ್ಟಿತ್ತೆಂದರೆ- ಸುಬ್ಬಣ್ಣನವರಿಗೆ- ‘ಕಾಡು ಕುದುರೆಯ ಸುಬ್ಬಣ್ಣ’ ಎಂಬ ಇನ್ನೊಂದು ಹೆಸರೇ ಅಂಟಿಕೊಂಡಿತು. ಅಷ್ಟೇ ಅಲ್ಲ, ಆ ಹಾಡು, ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಇಂಥದೊಂದು ಹಾಡು ಬರೆಯಲು ಕಂಬಾರರಿಗೆ ಸೂರ್ತಿಯಾದರೂ ಏನು? ಒಂದು ಕುದುರೆ ಓಡುವುದನ್ನು ಗಮನಿಸಿಯೇ ಅವರು ಪದ್ಯ ಬರೆದರೋ ಹೇಗೆ? ನಮಗೆಲ್ಲಾ ನಾಡ ಕುದುರೆ ಗೊತ್ತು. ಆದರೆ ಇದು ಕಾಡು ಕುದುರೆ! ಇಷ್ಟಕ್ಕೂ ಕಾಡು ಕುದುರೆ ಅನ್ನೋದು ಇದೆಯಾ? ಅಥವಾ, ಈ ಹಾಡಿನಲ್ಲಿ ಅದೊಂದು ಸಂಕೇತವಾಗಿ, ರೂಪಕವಾಗಿ ಬಂದಿದೆಯಾ?
ಇಂಥವೇ ಪ್ರಶ್ನೆಗಳೊಂದಿಗೆ ಚಂದ್ರಶೇಖರ ಕಂಬಾರರ ಮುಂದೆ ನಿಂತಾಗ ಅವರು ಹೀಗೆಂದರು: ‘ಇಂಗ್ಲಿಷಿನಲ್ಲಿ ಒಂದು ಕುದುರೆಯನ್ನೇ ಮುಖ್ಯ ಪಾತ್ರವಾಗಿಟ್ಟುಕೊಂಡು ಬರೆದ ಒಂದು ನಾಟಕ ಓದಿದೆ. ನನಗೆ ಅದು ಬಹಳ ಇಷ್ಟವಾಯಿತು. ಮುಂದೆ, ‘ಕುದುರೆ’ಯ ಪಾತ್ರ ಒಂದು ರೂಪಕವಾಗಿ, ಸಂಕೇತವಾಗಿ ಕಾಡತೊಡಗಿತು. ಆ ಸಂದರ್ಭದಲ್ಲಿಯೇ ಫ್ಯೂಡಲ್ ವ್ಯವಸ್ಥೆಯನ್ನು ವಿರೋಸುವ ನೆಲೆಯನ್ನು ಹೊಂದಿರುವ ‘ಕುದುರೆ ಸಿದ್ದ’ ಪದ್ಯ ಬರೆದೆ. ಅವರ ಕಥೆ, ಸಂಕ್ಷಿಪ್ತವಾಗಿ ಇಷ್ಟು: ಸಿದ್ದ ಒಬ್ಬ ಉಡಾಳ. ಅವನಿಗೆ ಪೊಗರು ಜಾಸ್ತಿ. ಈ ಉಡಾಳ ಭೂಪತಿಗೆ ರಾಜಕುಮಾರಿಯ ಮೇಲೆ ಕಣ್ಣು. ಅದೊಂದು ದಿನ ಇವನೇ ಅವಳ ಮುಂದೆ ತನ್ನ ಪ್ರೇಮದ ಬಗ್ಗೆ ಹೇಳಿಕೊಳ್ಳುತ್ತಾನೆ. ಆಕೆ, ಇವನ ಪ್ರೀತಿಯನ್ನು ಎಡಗೈಲಿ ನಿವಾಳಿಸಿ ಬಿಡುತ್ತಾಳೆ. ಇವನನ್ನು ಚುಚ್ಚುಮಾತುಗಳಿಂದ ಹಂಗಿಸುತ್ತಾಳೆ. ನಂತರ, ನನ್ನ ಪ್ರೀತಿ ಸಿಗಬೇಕು ಅನ್ನೋದಾದ್ರೆ- ‘ಒಂದು ಕುದುರೇನ ಪಳಗಿಸು ನೋಡೋಣ’ ಅನ್ನುತ್ತಾಳೆ.
ಮುಂದೆ ಈ ಕತೆಗೆ ಆಕಸ್ಮಿಕ ತಿರುವು ಸಿಕ್ಕಿ, ಸಿದ್ದ ಕುದುರೆ ಏರಿ ರಾಜ್ಯಗಳನ್ನೇ ಗೆಲ್ಲುತ್ತಾನೆ. ಇಷ್ಟಾದ ಮೇಲೆ ಅವನಿಗೋ ಕುದುರೆಯನ್ನು ಪಳಗಿಸಿ ರಾಜಕುಮಾರಿಯನ್ನು ಗೆಲ್ಲುವ ಆತುರ. ಇತ್ತ ರಾಜಕುಮಾರಿಗೆ, ಉಡಾಳ ಸಿದ್ದನಿಗೆ ಪಾಠ ಕಲಿಸುವ ಅವಸರ. ಹೀಗೆ, ಅವರಿಬ್ಬರೂ ಜಿದ್ದಾಜಿದ್ದಿಯಲ್ಲಿ ಇದ್ದಾಗಲೇ ನಾಯಕಿಯ ತಂಗಿಗೆ ಸಿದ್ದನ ಮೇಲೆ ಮೋಹ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಇಬ್ಬರ ಮನದಲ್ಲೂ ಬಯಕೆಯ ಬೆಂಕಿ ಹೊತ್ತಿ ಉರಿಯುತ್ತದೆ. ಮನಸ್ಸೆಂಬುದು ಕಡಿವಾಣವಿಲ್ಲದ ಹುಚ್ಚು ಕುದುರೆಯ ಥರಾ ಓಡುತ್ತದೆ. ಇದನ್ನೆಲ್ಲ ಸಂಭಾಷಣೆ ರೂಪದಲ್ಲಿ ಬರೆಯುವ ಬದಲು ಹಾಡಿನ ಮೂಲಕ ಹೇಳಿದ್ರೆ ಚೆಂದ ಅನ್ನಿಸ್ತು. ಹಾಗಾಗಿ ಕಾಡು ಕುದುರೆ ಓಡಿ ಬಂದಿತ್ತಾ…’ ಹಾಡು ಬರೆದೆ. ಪ್ರೇಮಿಗಳ ಎದೆಬಡಿತದ ಸದ್ದು ಜೋರಾಗಿರುತ್ತೆ ಎಂಬುದಕ್ಕೆ ತಮಟೆಯ ಸದ್ದನ್ನು ‘ಸಾಂಕೇತಿಕವಾಗಿ’ ಬಳಸಿಕೊಂಡೆ. ಸುಮ್ಮನೇ ಓದಿದರೆ, ಈ ಪದ್ಯ- ಓಡುತ್ತಿದ್ದ ಕುದುರೆಗೆ ಅನ್ವಯಿಸುವಂತೆ ಕಾಣುತ್ತದೆ. ಆದರೆ ವಾಸ್ತವವೇನೆಂದರೆ-‘ಮನುಷ್ಯನ ಕಾಮ, ಆ ಕ್ಷಣದ ಉದ್ರೇಕ, ಪ್ರೇಮದ ಅಮಲಿನಲ್ಲಿ ಆಗುವಂಥ ಮೈ ನಡುಕ, ಎಂಥ ರನನ್ನೂ ‘ಚಿತ್’ ಮಾಡಬಲ್ಲ ಚೆಂದದ ಬೆಡಗಿಯರ ಕತ್ತಿಯಂಚಿನಂಥ ನೋಟ… ಇಂಥವನ್ನೆಲ್ಲ ಹಾಡಿನ ಸಾಲುಗಳು ‘ಸಂಕೇತಿಸುತ್ತವೆ!’
ಈ ಮಾತಿಗೆ ಒಂದಿಷ್ಟು ಉದಾಹರಣೆ ನೋಡಿ: ‘ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ/ಹೊತ್ತಿ ಉರಿಯೊ ಕೇಶರಾಶಿ…’ ಅಂದರೆ- ಮೋಹಕ್ಕೆ ಸಿಕ್ಕಿಬಿದ್ದ ಹುಡುಗ/ಹುಡುಗಿಗೆ ಮೈಯೆಂಬುದು ಬೆಂಕಿಯ ಥರಾ ಆಗಿರ್ತದೆ. ಅದು ತಣ್ಣಗಾಗಬೇಕು ಅಂದರೆ ಅವರ ಸಮಾಗಮ ಆಗಬೇಕು! ಅದಷ್ಟನ್ನೂ ಎರಡೇ ಸಾಲುಗಳಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ ಕಂಬಾರ. ಇನ್ನು ‘ಸೊಂಟದ ಬುಗುರಿ ತಿರುಗುತ್ತಿತ್ತ/ಬಿಗಿದ ಕಾಂಡ ಬಿಲ್ಲಿನಿಂದ/ಬಿಟ್ಟ ಬಾಣದಾಂಗ ಚಿಮ್ಮಿ…’ ಮುಂತಾದ ಸಾಲುಗಳ ಅರ್ಥವನ್ನು ವಿವರಿಸುವುದು ಬೇಡ!
ಅಂದಹಾಗೆ, ‘ಕಾಡು ಕುದುರೆ’ ಚಿತ್ರದ ನಾಯಕ ಮಾನು. ಈ ಹಾಡಿನ ಚಿತ್ರೀಕರಣವಾದದ್ದು ಬೆಂಗಳೂರಿನಲ್ಲಿ. ಚಿತ್ರದಲ್ಲಿ ಬಳಸಲಾದ ಕುದುರೆ, ಬೆಂಗಳೂರಿನ ಮಾರ್ಕೆಟ್ನಲ್ಲಿದ್ದ ಒಬ್ಬ ಜಟಕಾ ಸಾಬರದ್ದು. ಆತ ಶೂಟಿಂಗ್ ಮುಗಿದ ತಕ್ಷಣ ಕುದುರೆಯೊಂದಿಗೆ ಮಾತಿಗೆ ಶುರುಮಾಡುತ್ತಿದ್ದನಂತೆ. ‘ಏಯ್, ಆ ಸೀನ್ನಾಗೆ ಇನ್ನೂ ಚೆನ್ನಾಗಿ ಮಾಡ್ಬೇಕಿತ್ತು ಕಣೋ, ಸೊಕ್ಕು ನಿನಗೆ. ಭಾಂಛೋದ್. ಹೇಳಿದ ಮಾತು ಕೇಳೋದಿಲ್ಲ ಅಂತೀಯ. ಇನ್ನೂ ಚೆನ್ನಾಗಿ ಮಾಡಿ ಪಿಕ್ಚರ್ನಾಗೆ ಮಿಂಚಬೇಕು ನೀನು. ತಿಳ್ಕಾ’ ಎಂದು ದಬಾಯಿಸುತ್ತಿದ್ದನಂತೆ. ನಂತರ, ತಾನು ಕುಡಿಯುತ್ತಿದ್ದ ರಮ್ಮನ್ನು ಅದಕ್ಕೂ ಕುಡಿಸಿ- ಇನ್ಮೇಲೆ ಛಂದಾಗಿ ಮಾಡ್ಬೇಕು ಕಣೋ’ ಎಂದು ಬುದ್ಧಿ ಹೇಳುತ್ತಿದ್ದನಂತೆ. ಆ ಕುದುರೆ ‘ಸರಿ ಸರಿ’ ಎನ್ನುವಂತೆ ತಲೆಯಾಡಿಸುತ್ತಿತ್ತಂತೆ. ಈ ಸಂಗತಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಕಂಬಾರರು, ಈ ಹಾಡು ಬರೀದಿದ್ರೆ ಕುದುರೆ ‘ಗುಂಡು’ ಹಾಕೋದ್ನ ನೋಡಲು ಸಾಧ್ಯವಿರಲಿಲ್ಲ ಎಂದು ನಗುತ್ತಾರೆ.
ಅಂದಹಾಗೆ, ಈ ಹಾಡಿನ ಮೂರು ಚರಣದಲ್ಲಿ ಎರಡನ್ನು ಸುಬ್ಬಣ್ಣ ಹಾಗೂ ಇನ್ನೊಂದನ್ನು ಕಲ್ಪನಾ ಶಿರೂರು ಹಾಡಿದ್ದಾರೆ. ಆದರೆ ರಾಷ್ಟ್ರ ಪ್ರಶಸ್ತಿಯನ್ನು ಸುಬ್ಬಣ್ಣ ಅವರಿಗೆ ಮಾತ್ರ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಕಲ್ಪನಾ, ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದರಂತೆ. ಹಾಗೇನಾದರೂ ಮಾಡಿದರೆ ಚಿತ್ರದ ಬಿಡುಗಡೆಗೆ ತೊಂದರೆ ಆಗುತ್ತೆ ಎಂದು ನಾವೆಲ್ಲ ಆಕೆಯನ್ನು ಸಮಾಧಾನಿಸಿ ಸುಮ್ಮನಿರಿಸಿದೆವು. ನ್ಯಾಯಯುತವಾಗಿ ಇಬ್ಬರಿಗೂ ಪ್ರಶಸ್ತಿ ಸಿಗಬೇಕಿತ್ತು. ಆದರೆ ತೀರ್ಪುಗಾರರ ನಿರ್ಣಯವನ್ನು ಪ್ರಶ್ನಿಸಲಾಗದು’ ಅಂದರು ಕಂಬಾರ.
* * *
ಈ ಹಾಡಿಗೆ, ರಾಷ್ಟ್ರಪ್ರಶಸ್ತಿ ಬಂತಲ್ಲ? ನಂತರದಲ್ಲಿ ಎಲ್ಲಿ ನೋಡಿದರೂ, ಅದೇ ಹಾಡು. ಅದೇ ರಾಗ. ಹೀಗಿರುವಾಗಲೇ ಹಿರೇಕೆರೂರಿನಲ್ಲಿ ನಡೆದ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಸುಬ್ಬಣ್ಣ ಹೊರಟಿದ್ದರು. ಹಿರೇಕೆರೂರಿಗೆ ಸಮೀಪದಲ್ಲೇ ಅವರಿದ್ದ ಬಸ್ಸು ಕೆಟ್ಟುಹೋಯಿತು. ಆಗಲೇ ಕತ್ತಲಾಗತೊಡಗಿತ್ತು. ಹೇಗಿದ್ದರೂ ಊರು ಹತ್ತಿರವಿದೆಯಲ್ಲ? ನಡೆದೇ ಹೋಗಿಬಿಡೋಣ ಎಂದು ಹೊರಟೇಬಿಟ್ಟರು ಸೂಟುಧಾರಿ ಸುಬ್ಬಣ್ಣ.
ಹೀಗೇ ಸ್ವಲ್ಪ ದೂರ ಹೋದರೆ, ಅಲ್ಲೊಂದು ಆಲದ ಮರದ ಕೆಳಗೆ, ಸೊಪ್ಪು-ಸದೆ ಸೇರಿಸಿ ಬೆಂಕಿ ಹಾಕಿದ್ದ ಹದಿಹರಯದ ಜನ, ತಮಟೆ ಬಾರಿಸಿಕೊಂಡು ಎತ್ತರದ ದನಿಯಲ್ಲಿ ‘ಕಾಡು ಕುದುರೆ ಓಡಿಬಂದಿತ್ತಾ…’ ಎಂದು ಹಾಡುತ್ತಿದ್ದರಂತೆ. ನಡೆಯುವುದನ್ನು ಮರೆತು, ಮೈಮರೆತು ತಾವೇ ಹಾಡಿದ್ದ ಆ ಹಾಡು ಕೇಳಿದ ಸುಬ್ಬಣ್ಣ- ಹಾಡು ಮುಗಿದಾಕ್ಷಣ ಚಪ್ಪಾಳೆ ಹೊಡೆದು- ‘ನಾನು ಶಿವಮೊಗ್ಗದವನು. ಹಿರೇಕೆರೂರ್ನಲ್ಲಿ ಸ್ವಲ್ಪ ಕೆಲ್ಸ ಇತ್ತು. ಹಾಳಾದ್ದು ಬಸ್ಸು ಕೆಟ್ಟೋಯ್ತು. ಅದು ಒಳ್ಳೇದೇ ಆಯ್ತು ಅನ್ನಿ. ಇಲ್ದಿದ್ರೆ ನಿಮ್ಮ ಹಾಡು ಕೇಳಲು ಆಗ್ತಿರಲಿಲ್ಲ. ಇರಲಿ. ನೀವೆಲ್ಲ ಯಾರು? ಇನ್ನೂ ಯಾವ್ಯಾವ ಹಾಡು ಹೇಳ್ತೀರಿ?’ ಎಂದು ಪ್ರಶ್ನಿಸಿದರಂತೆ.
ತಕ್ಷಣವೇ ಆ ಗುಂಪಿನ ಮುಖಂಡನಂತಿದ್ದ ವ್ಯಕ್ತಿ- ‘ನಾವೆಲ್ಲ ಹತ್ತಿಗಿರಣಿ ಕೆಲಸಗಾರರು. ನಾವು ಬೇಕಾದಷ್ಟು ಪದಗಳ್ನ ಹಾಡ್ತೀವಿ ಬುದ್ದೀ. ಆದ್ರೆ ಈ ಕಾಡುಕುದ್ರೆ ಹಾಡು ನಮ್ಗೆ ಬೋ ಕುಸಿ ಕೊಡ್ತದೆ. ಪಿಚ್ಚರ್ನಾಗೆ ಅದ್ಯಾವನೋ ಬಡ್ಡಿಹೈದ ಸುಬ್ಬಣ್ಣಾಂತ, ಆವ್ನಯ್ಯನ್, ಅದೇನ್ ಸೂಪರ್ರಾಗಿ ಹಾಡವ್ನೆ ಅಂತೀರಿ? ಏಟ್ದಪ ಕೇಳಿದ್ರೂ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸ್ತದೆ. ಆ ಸುಬ್ಬಣ್ಣನೂ ಸಿವಮೊಗ್ಗದಾಗೇ ಅವ್ನಂತೆ. ನೀವೂ ಅಲ್ಲಿಯವ್ರೇ ಅಂದ್ಮೇಲೆ ನಿಮ್ಗೆ ಸುಬ್ಬಣ್ಣ ಗೊತಾ’ ಎಂದು ಕೇಳಿದರಂತೆ!
ಗುರುತು ಪರಿಚಯವಿಲ್ಲದ ಆ ಜನರ ನಿಂದಾಸ್ತುತಿಯಿಂದ ಖುಷಿಗೊಂಡ ಸುಬ್ಬಣ್ಣ- ‘ಗೊತ್ತಿಲ್ಲ ಗೊತ್ತಿಲ್ಲ, ನಂಗವ ಗೊತ್ತಿಲ್ಲ’ ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತರಂತೆ!
ಕುದುರೆಯ ಓಟ ವರ್ಣಿಸುವ ಈ ಹಾಡಿನ ಸಾಲುಗಳಲ್ಲಿ ಎರಡೆರಡು ಅರ್ಥವಿದೆ!
ಕೃಪೆ: ವಿಜಯ ಕರ್ನಾಟಕ

20-09-2001

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

R. Vijayaraghavan
2011-10-07 09:30:27

my poem on horse is the response i have for the poem published-- viha books 2010 ಕುದುರೆ ಬೆಟ್ಟವ ಕಡಿವಷ್ಟು ಕಸುವು ಕಾಲೊಳಗಿಟ್ಟ ಬ್ರಹ್ಮಾಂಡದುದ್ದಗಲ ನಾಗಾಲೋಟಕ್ಕೆ ತಕ್ಕ ಜೀನಸು ಬಿಗಿದು, ಮಾಲೀಸು ಮಾಡಿ ಅಣಿಮಾಡಿದ ಮಿರಿಮಿಂಚುವ ಕುದುರೆ ಬಾಲಬಯಕೆಯಲಿ ಮೇಲೇರಿ ಕೂತ ಶಬ್ದದ ಮೂಟೆ ಬಡಿದದ್ದು ಯಾವ ಅರಿವಿಗೆಟುಕದ ಅಯಸ್ಕಾಂತ ಶಕ್ತಿ ನಿಂತುಹೋಗಿದೆ ನಿಂತಲ್ಲಿಂದ ಕಾಲು ಕೀಳದೆ ತಹತಹವಿಲ್ಲ ಏನನ್ನೋ ಮೆಲ್ಲುತ್ತ ಅರ್ಧನಿಮೀಲಿತ ನೇತ್ರ ಹುರಿದುಂಬಿಸುವ ಮೃದು ತಾಡನಕ್ಕೆ ಹಿಮ್ಮಡಿಯ ಮೆಟ್ಟು, ಚಬಕಿನೇಟುಗಳಿಗೆ ಪ್ರತಿಕ್ರಿಯೆಯಿಲ್ಲದೆ ನಿಂತುಹೋಗಿದೆ ನಿಂತಲ್ಲಿಂದ ಕಾಲು ಕೀಳದೆ ಈ ದಿವ್ಯಾಶ್ವವನ್ನೇರಿ, ಮನಬಂದ ಕಡೆ ತೇಲಿ ನಿಗೂಢ ದಿವ್ಯಗಳನ್ನು ಹಾಯ್ದು ಗಾಣದಿರುಕುಗಳಲ್ಲಿ ಮೈಗಳೆದು ರಸಕಳೆದು ಕುದ್ದ ದಿವ್ಯಯಜ್ಞದ ಪಾಯಸದ ಬಯಕೆ ಅಂಗಳದ ರಂಗವಲ್ಲಿಯ ಮನಸ್ಸಿನ ತುಂಬ ಬಣ್ಣ ಬಣ್ಣದ ಬೆಳಕ ಕನಸು ಎಳೆ ಎಳೆವ ಕುದುರೆ ನಿಂತುಬಿಟ್ಟಿದೆ ನಿಂತಲ್ಲಿಂದ ಕಾಲು ಕೀಳದೆ ಮಾಯಾಶ್ವದ ಕೀಲು ಸೆಟೆದು ನಿರಾಸೆಯಲ್ಲಿ ಶಬ್ದದ ಮೂಟೆ ಬಿಕ್ಕುತ್ತಿದೆ ಸಂಕ್ರಮಣ, ಆದರೆ ಎಲ್ಲವೂ ತಟಸ್ಥ ಯಾಕೆ ಯಾಕೆನ್ನ ಕುದುರೆಯೇ ತಲ್ಲಣದ ವೇಗದಲಿ ಕೀಲಿಸಿತೇನು ಕಾಲು ಯಾಕೆ ಮಾತಾಡಲೊಲ್ಲೆ ಮನಸ್ಸಿನ ಮಾತಿಗೂ ಕಡಿವಾಣ ಬಿದ್ದಿತೇನು ಖಣಖಣಿಸುವ ಸಂಕಲೆಯ ಸದ್ದಿನ ಪ್ರತಿಬಿಂಬ ರೆಕ್ಕೆ ಪಿಳುಕಿಸದ ಕುದುರೆಗಣ್ಣಿನ ಭಿತ್ತಿಯಲ್ಲಿ ರಕ್ತತಾಂಬೂಲದ ರಸಗಿಚ್ಚನ್ನು ಉಣ್ಣುತ್ತಿರುವ ಚಿತ್ರಗಳ ಸಾಲು ಜಂಬೂಸವಾರಿ ವೈಭೋಗ ಎಂಥ ನಿರ್ಮೋಹಿ ನನ್ನ ಕುದುರೆ ಎಷ್ಟು ನಿಸೂರು ನನ್ನ ಕುದುರೆ ಕಾಲಕಾಲಗಳಲ್ಲಿ ಎಷ್ಟು ನದಿ ಈಸಿದ್ದೆ ಏನೇನು ಕಂಡಿದ್ದೆ ಯಾವ ಓಲೆಕಾರನ ಕೈನ ಯಾವ ರಾಯಸ, ಆಣತಿ ಯಾವನಜ್ಞಾತ ಕನಸು ಏನೇನು ಹೊತ್ತಿದ್ದೆ ಏಸು ಗಾವುದವಿತ್ತೆ ಕೊನೆಗಾಣದೋಟವದು ಶಬ್ದದ ಮೂಟೆ ಸಂಚಾರಕ್ಕೆ ನಿನ್ನನೇರಿದುದು ತಪ್ಪೇನು ಹೇಳು ಕುದುರೆ ಕಾಲಯಾನದ ಕನಸ ಕೊಂದು ನಿಂತೆ ಏಕೆ ಏಕೆಂದು ಹೇಳು ಕುದುರೆ

R. Vijayaraghavan
2011-10-31 09:32:24

ನನ್ನ ಯೋಚನಾ ಕ್ರಮಕ್ಕೂ, ಕಂಬಾರರಿಗೂ ಎಂಥ ಅಗಾಧ ವ್ಯತ್ಯಾಸವಿದೆ ಎಂದು ಎರಡನ್ನೂ ಮತ್ತೆ ಒಟ್ಟಿಗೆ ಓದಿದಾಗ ಅರಿವಾಯಿತು. ನನ್ನ ಕವಿತೆ ಕಂಬಾರರ ಕವಿತೆಗೆ ವಿರುದ್ಧ ದಿಕ್ಕಿನಲ್ಲಿಇದೆ. ಕಂಬಾರರಿಗೆ ನಮೋನಮಃ ಒಂದು ವಿಚಾರ, ನನ್ನ ಕವಿತೆ ಕವಿತೆಯಿದ್ದ ರೂಪದಲ್ಲಿ ಅಚ್ಚಾಗಿಲ್ಲ. ಆರ್‌.ವಿಜಯರಾಘವನ್‌


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು