'ಮನಸಾರೆ' ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದಸಂವಾದ.ಕಾಂ ಮನಸಾರೆ.... ಹಳೆ ಪಾತ್ರೆ, ಹಳೆ ಕಬ್ಣ, ಹಳೆ, ಲವ್ವು, ಹಳೆ ಲವ್ವು ಫೇಲ್ಯೂರ್. ಉಸಿರಾಡೋ ಗಾಳೀಲಿ ಕೂಡ ಹೊಸತನ ಇಲ್ಲ. ಅಂತ ಕೊರಗಿ , ಊರವರಿಂದೆಲ್ಲ ಅರೆ ಹುಚ್ಚ ಎನಿಸಿಕೊಂಡಿರುವ ನಾಯಕ.ಅದೇ ಹಳೆ ಮಚ್ಚು, ಹಳೆ ಲಾಂಗು, ಹಳೆ ಪ್ರೇಮ್ ಕಹಾನಿ ಚಿತ್ರಗಳನ್ನು ನೋಡಿ ಅರೆ ಹುಚ್ಚನಾಗಿರುವ ಕನ್ನಡ ಪ್ರೇಕ್ಷಕ. ಈ ಇಬ್ಬರೂ ಅರೆ ಹುಚ್ಚರನ್ನು ದಡ ಸೇರಿಸುವ ಕೆಲಸವನ್ನ ಭಟ್ಟರು ಮನಸಾರೆ ಮಾಡಿದ್ದಾರೆ. ಮುಂಗಾರು ಮಳೆಯ ನಾಯ ಮುಂಗಾರುಮಳೆ ಯಲ್ಲಿದ್ದ ಭಾವೋದ್ವೇಗ ಇಲ್ಲಿಲ್ಲ. ಆ ಮಟ್ಟಿಗೆ ಯೋಗರಾಜ್ ಮೆಚ್ಯೂರ್ ಆಗಿದ್ದಾರೆ. ಇಡೀ ಚಿತ್ರ ಆಪ್ತ ಸಮಾಲೋಚನೆಯಂತೆ ನಡೆದು ಹೋಗುತ್ತದೆ. ಚಿತ್ರಕಥೆ ಅತ್ಯಂತ ಬಿಗಿಯಾಗಿದ್ದರೂ ಕಥೆಯಲ್ಲಿ ಯಾವುದೇ ರೀತಿಯ ಸಂಕೀರ್ಣತೆ ಇಲ್ಲ. ಮುಂಗಾರು ಮಳೆ ಯ ಗಣೇಶ ನಂತೆ ಮನಸಾರೆಯ ಮನೋಹರ ಕೂಡ ವಾಚಾಳಿ. ತಮಗೆ ಹೇಳಬೇಕನ್ನಿಸದ್ದನ್ನೆಲ್ಲ ಭಟ್ಟರು ನಾಯಕನ ಬಾಯಲ್ಲಿ ಆಡಿಸಿದ್ದಾರೆ. ಅಷ್ಟಕ್ಕೂ ಯೋಗರಾಜರಿಗೆ ಹೆಣ್ಣನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ ಅನಿಸಿರುವ ಹಾಗಿದೆ. ಚಿತ್ರದ ತುಂಬೆಲ್ಲಾ ಹೆಣ್ಣಿನ ಕುರಿತಾದ ಸಾಕಷ್ಟು ಸಂಭಾಷಣೆಗಳು ಉದುರುತ್ತವೆ. ಅದಾಗ್ಯೂ ಚಿತ್ರದ ನಾಯಕಿಯ ಪಾತ್ರ ಪೋಷಣೆ ಚಿತ್ರದ ಬಹುದೊಡ್ಡ ಕೊರತೆ. ಸ್ವಲ್ಪ ಅತ್ತ ಗಮನ ಕೊಟ್ಟಿದ್ದರೆ, ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆ ಬರುತ್ತಿತ್ತು. ಮನುಷ್ಯ ಸಂಬಂಧಗಳ ನಗ್ನತೆಯನ್ನ ಅಲ್ಲೊಮ್ಮೆ ಇಲ್ಲೊಮ್ಮೆ ಮಾತುಗಳಲ್ಲಿ ಬಿಚ್ಚಿಡುವ ನಿರ್ದೇಶಕರು ಕಥೆಯೊಳಗೆ ಅದನ್ನು ಎಳೆದು ತರುವ ಗೊಜಿಗೆ ಹೋಗುವುದಿಲ್ಲ. ಸಮಾಜವನ್ನ ಧಿಕ್ಕರಿಸಿ ಮತ್ತೆ ಹುಚ್ಚಾಸ್ಪತ್ರೆಗೆ ಹೋಗಿ ಸೇರುವ ನಾಯಕ; ಅಲ್ಲಿಯ ಮಾನಸಿಕ ಅಸ್ವಸ್ಥೆಯನ್ನ ಮೆಚ್ಚಿ, ಪ್ರೀತಿಸುತ್ತಾನೆ. ಇಲ್ಲಿ ಅರ್ಥವಾಗದ ಪ್ರಶ್ನೆ ಎಂದರೆ: ಬದುಕಿನಲ್ಲಿ ಎಲ್ಲದಕ್ಕೂ ಬೇಸತ್ತು ಹೋಗಿರುವ ನಾಯಕ, ಬರೀ ನಾಯಕಿಯ ಕೂದಲಿಗೆ ಮರುಳಾಗಿ ಜೀವನ ಪ್ರೀತಿಯನ್ನ ಪಡೆದುಕೊಳ್ಳುವುದು ಹೇಗೆ? ರಾಜು ತಾಳಿಕೋಟೆಯವರ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೊಂದು ನಾವಿನ್ಯತೆ ಒದಗಿಸಿದೆ. ಎಲ್ಲಾ ಹಾಡುಗಳು ಕಥೆಗೆ ಅನಗತ್ಯ. ಮನಸಾರೆ ಒಪ್ಪಲಾಗದಿದ್ದರೂ , ಮನಸಾರೆ ಮೆಚ್ಚಬಹುದಾದ ಚಿತ್ರವಿದು..
|
|