ದೃಶ್ಯಕ್ಕೊಂದು ನುಡಿಗಟ್ಟು

ಜಸ್ಟ್..ಮಿಸ್ ಆಗದಿರಲಿ

ಥನದ ಸಾಧ್ಯತೆ ಹಲವು. ತನ್ನ ಒಂದು ಕಥೆಯೊಳಗೆ ಬೇರೆಯವರ ಕಥೆಯೊಂದು ಇನ್ನೊಂದೇ ಆಗಿ ಅಡಗಿಕೊಂಡಿರುತ್ತದೆ. ಈ ಸಾಧ್ಯತೆಯನ್ನ ಒಳಗೊಂಡಿರುವ ಜಸ್ಟ್ ಮಾತ್ ಮಾತ್ ಲ್ಲಿ ಕನ್ನಡದ ಕಾಂಟೆಂಪರರಿ ಸಿನೆಮಾ.

ಬೆಂಗಳೂರಿನಂತಹ ನಗರಗಳಲ್ಲಿ ಮತ್ತವಿಲಾಸದಲ್ಲಿ ಮುಳುಗಿರುವ ಯುವಜನಾಂಗ ಬದುಕನ್ನ ಎದುರುಹಾಕಿಕೊಳ್ಳುವ ರೀತಿಯೇ ಬೇರೆಯಾಗಿದೆ. ಸಂಬಂಧಗಳು ಬೇಕು; ಆದರೆ ಬದ್ದತೆ ಬೇಡ. ಒಬ್ಬರು ಇನ್ನೊಬ್ಬರನ್ನ ಸಹಿಸಿಕೊಳ್ಳುವವರೆಗೆ ಮಾತ್ರ ಒಡನಾಟ, ನಂತರ ಜೂಟಾಟ. ಇಂತಹ ಮತ್ತವಿಲಾಸದಲ್ಲಿ, ಬಯಸಿ ಬಂದ ಯುವತಿಯರನ್ನೆಲ್ಲ ನಿರಾಕರಿಸದೇ, ಕಮಿಟ್ ಕೂಡ ಆಗದ ನಾಯಕ "ಜಗತ್ತಿನ ಹಿಂದೆ ನಾವಿರಬಾರದು, ನಮ್ಮ ಹಿಂದೆ ಜಗತ್ತಿರಬೇಕು" ಅನ್ನುತ್ತಾನೆ. ಇವನನ್ನ ಅತಿಯಾಗಿ ಹಚ್ಚಿಕೊಳ್ಳುವ ಯುವತಿಯೊಬ್ಬಳು ಇವನಿಂದ ತಿರಸ್ಕರಿಸಲ್ಪಟ್ಟು ದುರಂತಕ್ಕೊಳಗಾದ ನಾಯಕ ಆಘಾತಕ್ಕೊಳಗಾಗುತ್ತಾನೆ. ತನ್ನನ್ನು ಕಾಡುವ ತಪ್ಪಿತಸ್ಥ ಭಾವದಿಂದ ಹತಾಶನಾಗುವ ನಾಯಕನ ವ್ಯಕ್ತಿತ್ವ ಸಾವಕಾಶವಾಗಿ ಬದಲಾಗುತ್ತಾ ಹೋಗುತ್ತದೆ. ಅಲ್ಲಿ ಸಂಭವಿಸುವ ಇನ್ನೊಂದು ಪ್ರೇಮ ಕಥೆ, ಅದನ್ನ ಪಡೆದೇ ತೀರಲು ಆತನ ಹೆಣಗಾಟಗಳು, ಕೊನೆಯಲ್ಲಿ ತನ್ನ ಪ್ರೇಮ ಕಥೆಯನ್ನ ಆಸ್ವಾದಿಸುತ್ತಿದ್ದ ಸಹಪ್ರಯಾಣಿಕನೇ ತನ್ನ ಕಥೆಯ ದುರಂತ ಕೊನೆಯ ಭಾಗವಾಗುವುದು ಎಲ್ಲವೂ ಗಂಭೀರವಾಗಿ ಮೂಡಿ ಬಂದಿದೆ.

ನಿಸ್ಸಂದೇಹವಾಗಿ ಇದು ಸುದೀಪ್ ನಿರ್ದೇಶಿಸಿದ ಚಿತ್ರಗಳಲ್ಲೇ ಅತ್ಯುತ್ತಮವಾದದ್ದು. ನಿರ್ದೇಶಕರಾಗಿ ಅವರು ಇನ್ನಷ್ಟು ಮಾಗಿದ್ದಾರೆ. ರಮ್ಯರ ಅಭಿನಯ ಅವರ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಚೆನ್ನಾಗಿ ಮೂಡಿ ಬಂದಿದೆ. ಕುತೂಹಲಕ್ಕೆ ಕೇಳಿಸಿಕೊಂಡ ಕಥೆ ತನ್ನ ಬದುಕಲ್ಲೇ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿಂದ ಅಧಿರನಾಗುವ ಪಾತ್ರದಲ್ಲಿ ರಾಜೇಶ್ ಇಷ್ಟವಾಗುತ್ತಾರೆ.


ಅರುಣ್ ಸಾಗರ್ ರ ಕಲಾ ನಿರ್ದೇಶನ ಚಿತ್ರದ ಮೂಡ್ ಅನ್ನು ಕಟ್ಟಿಕೊಟ್ಟಿದೆ. ರಘು ದೀಕ್ಷಿತ್ ರ ಸಂಗೀತ ಎಲ್ಲೂ ಚಿತ್ರದ ಮೇಲೆ ಸವಾರಿ ಮಾಡುವುದಿಲ್ಲ. ಕ್ಯಾಮೆರಾ ಕೈ ಚಳಕದಲ್ಲಿ ಆಗಾಗ
ರಾಮ್ ಗೋಪಾಲ್ ವರ್ಮಾರ ನೆರಳಿದ್ದರೂ ಒಟ್ಟಾರೆಯಾಗಿ ಪ್ರಭಾವಶಾಲಿಯಾಗಿದೆ. ಕಥೆಯ ಪರಿಣಾಮವನ್ನ ವಿಸ್ತರಿಸುವಲ್ಲಿ ಕ್ಯಾಮೆರಾವನ್ನ ಸುದೀಪ್ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.


ಚಿತ್ರಕಥೆ ಬಿಗಿಯಾಗಿದೆ, ಸಂಭಾಷಣೆ ಫರ್ಸ್ಟ್ ಕ್ಲಾಸ್.


ಸಿನೆಮಾವನ್ನು ಹೆಚ್ಚು ವಾಚ್ಯವಾಗಿಸದೇ ಭಾವಾಭಿವ್ಯಕ್ತಿಯಲ್ಲೇ ಕಥೆ ಹೇಳುವ ಮೂಲಕ ಸುದೀಪ್ ಕನ್ನಡದ ಮಹತ್ವದ ನಿರ್ದೇಶಕರಾಗುವ ಭರವಸೆ ನೀಡಿದ್ದಾರೆ.


ತುಂಬಾ ದಿನಗಳ ನಂತರ ಒಂದು ನೋಡೆಬಲ್ ಸಿನೆಮಾ ಬಂದಿದೆ. 

ಜಸ್ಟ್ ಮಿಸ್ ಮಾಡದಿರಿ!


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು